ಶಿರಸಿ :- ಹುಬ್ಬಳ್ಳಿಯ ‘ವಿಶ್ವವಿಜಯ’ ಪತ್ರಿಕೆಯವರು ನೀಡುವ ‘ಶಿಕ್ಷಣ ಸೇವಾರತ್ನ’ ಪ್ರಶಸ್ತಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೆರಕನಹಳ್ಳಿಯ ಮುಖ್ಯಶಿಕ್ಷಕರಾದ ಶ್ರೀ ರಮೇಶ ಹೆಗಡೆ ಕೆರೆಕೋಣ ಇವರಿಗೆ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿಯಲ್ಲಿ ನಡೆದ -‘ವಿಶ್ವವಿಜಯ’ ಪತ್ರಿಕೆಯ 17 ನೇ ವಾರ್ಷಿಕೋತ್ಸವದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಹಿಂದೆ ಇವರು – ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಪಾಂಡುರಂಗ ಜಿಲ್ಲಾ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ‘ಜ್ಞಾನಜ್ಯೋತಿ’ ಪ್ರಶಸ್ತಿ (ಬೆಂಗಳೂರು), ಸುವರ್ಣ ಕನ್ನಡಿಗ ಪ್ರಶಸ್ತಿ (ಮೈಸೂರು) ಈ ಪ್ರಶಸ್ತಿಗಳನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
ಇವರು ವಿವಿಧ ಆನ್ಲೈನ್ ಸಾಹಿತ್ಯಿಕ ಸ್ಪರ್ಧೆಗಳಲ್ಲಿ 150 ಕ್ಕಿಂತ ಹೆಚ್ಚು ಇ-ಪ್ರಮಾಣ ಪತ್ರಗಳನ್ನು ಗಳಿಸಿರುತ್ತಾರೆ. ಶಿಕ್ಷಕರ ವಿವಿಧ ಸ್ಪರ್ಧೆಗಳಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾಗಿರುತ್ತಾರೆ. ಅವರ ಮೂರು ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿದ್ದು, ಕೆಲವು ಹಸ್ತಪ್ರತಿಯಲ್ಲಿವೆ. ನಾಡಿನ 20 ಕ್ಕಿಂತ ಹೆಚ್ಚಿನ ಪತ್ರಿಕೆಗಳಲ್ಲಿ ಇವರ ಲೇಖನ, ಕವನ, ಚುಟುಕುಗಳು ಪ್ರಕಟವಾಗಿವೆ. ಶಾಲಾ ಎಸ್.ಡಿ.ಎಮ್.ಸಿ ಯವರು ಹಾಗೂ ಶಿಕ್ಷಕ ಬಳಗದವರು ಸಂತಸ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿರುತ್ತಾರೆ.