ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಶ್ರೀರಾಮನವಮಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವವು ಶುಕ್ರವಾರ ಶ್ರೀವೀರಾಂಜನೇಯ ದೇವರ ಪುಷ್ಪರಥೋತ್ಸವ ಹಾಗೂ ಶನಿವಾರ ಬ್ರಹ್ಮರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಮಾರುತಿ ಗುರೂಜಿಯವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜಾತ್ರಾ ಮಹೋತ್ಸವವು ಆಯೋಜನೆಗೊಂಡಿತ್ತು. ಏ.10ರಂದು ‘ಶ್ರೀರಾಮನವಮಿ ಉತ್ಸವ’, 11ರಿಂದ 14ರ ಮುಂಜಾನೆಯವರೆಗೆ ‘ಶರಾವತಿ ಕುಂಭ- ಶರಾವತಿ ಆರತಿ’, 15ರಂದು ಶ್ರೀವೀರಾಂಜನೇಯ ದೇವರ ‘ಪುಷ್ಪರಥೋತ್ಸವ’, 16ರಂದು ‘ಶ್ರೀನಿವಾಸ ಕಲ್ಯಾಣೋತ್ಸವ’ ಹಾಗೂ ಶ್ರೀ ವೀರಾಂಜನೇಯ ದೇವರ ‘ಬ್ರಹ್ಮರಥೋತ್ಸವು’ ತಾಂತ್ರಿಕರಾದ ವೇ.ಬ್ರ.ಗಜಾನನ ಭಟ್ ಹಿರೇ ಇವರ ವೈದಿಕತ್ವದಲ್ಲಿ ನೆರವೇರಿತು.
ವಾರಗಳ ಕಾಲ ಶ್ರೀಕ್ಷೇತ್ರ ಬಂಗಾರಮಕ್ಕಿ ತಳಿರು ತೋರಣ, ಪತಾಕೆ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಸಹಸ್ರಾರು ಭಕ್ತರು ಈ ವೈಭವವನ್ನು ನೋಡಿ ಕಣ್ತುಂಬಿಸಿಕೊಂಡರು. ಭಕ್ತಾದಿಗಳು ಸಹ ಶ್ರೀದೇವರಿಗೆ ವಿಶೇಷ ಸೇವೆಗಳನ್ನು ಸಲ್ಲಿಸುವುದರ ಮೂಲಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ವೀರಾಂಜನೇಯ ದೇವರ ಕೃಪೆಗೆ ಭಾಜನರಾದರು.
‘ಗ್ರಾಮ ಒನ್’ ನಗರಬಸ್ತಿಕೇರಿ ಸಹಕಾರದೊಂದಿಗೆ ಏ.10ರಿಂದ 16ರವರೆಗೆ ಜಾತ್ರಾ ವಿಶೇಷವಾಗಿ ‘ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಉಚಿತ ನೋಂದಣಿ ಅಭಿಯಾನ’ವನ್ನು ಆಯೋಜಿಸಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡರು.