ಶಿರಸಿ: ಮಠದ ಕಟ್ಟಡಗಳ ಅಭಿವೃದ್ದಿ ಕಾರ್ಯಕ್ಕೆ ಕಳಶ ಇಟ್ಟಂತೆ ರಾಜಗೋಪುರ ಮೂಡಿ ಬಂದಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಬಣ್ಣಿಸಿದರು.
ಅವರು ಶುಕ್ರವಾರ ಸ್ವರ್ಣವಲ್ಲೀ ಯಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜ ಗೋಪುರ ಲೋಕಾರ್ಪಣೆಗೊಳಿಸಿ ಇದಕ್ಕೆ ಯೋಗ ದಾನ ನೀಡಿದ ವಿ.ಟಿ.ಹೆಗಡೆ ಜಾನ್ಮನೆ ಕುಟುಂಬವನ್ನು ಗೌರವಿಸಿ ಆಶೀರ್ವಚನ ನುಡಿದರು.
2009ರಿಂದ ಮಠದ ಕಟ್ಟಡ ಅಭಿವೃದ್ದಿ ಆಗುತ್ತಿದೆ. ಅಂತಿಮವಾಗಿ ಎತ್ತರದ ರಾಜ ಗೋಪುರ ಅಪರೂಪವಾಗಿ ನಿರ್ಮಾಣಗೊಂಡಿದೆ. ಸಂಸ್ಕೃತದಲ್ಲಿ ಗೋ ಎಂದರೆ ವೇದ ಅಧ್ಯಯನ ಕೇಂದ್ರ ಎಂಬ ಅರ್ಥವಿದೆ. ಮಠದಲ್ಲಿ ವೇದ ಅಧ್ಯಯನ , ಅಧ್ಯಾಪನ ಆಗುತ್ತಿದೆ. ಈ ಗೋಪುರ ಅದಕ್ಕೆ ಕಳಶ ಇಟ್ಟಂತೆ ಆಗಿದೆ. ಬಹು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಇದು ವಿ.ಟಿ.ಹೆಗಡೆ ಅವರ ಯೋಗದಾನದಿಂದ ಆಗಿದೆ ಎಂದರು.
ಈ ಗೋಪುರದಲ್ಲಿ ಏಳು ಅಂತಸ್ತಿದೆ. ಏಳೂ ಹಂತದಲ್ಲಿ ಮಹಾಗಣಪತಿಯಿಂದ ಮಹಾವಿಷ್ಣು ತನಕ ವಿವಿಧ ದೇವರ ಮೂರ್ತಿ ಇದೆ. ಅವೂ ಆಕರ್ಷಕವಾಗಿ ಮೂಡಿ ಬಂದಿದೆ ಎಂದ ಶ್ರೀಗಳು, ವಿ.ಟಿ ಹೆಗಡೆ ಅವರೇ ಮುಂದೆ ಬಂದು ನೆರವಾಗಿದ್ದಾರೆ. ವಿ.ಟಿ.ಹೆಗಡೆ ಅವರು ಜೀವನದುದ್ದಕ್ಕೂ ತಪಸ್ಸಿನಿಂದ ಮಾಡಿದ ಶ್ರಮ ಗೋಪುರವಾಗಿದೆ. 65 ವರ್ಷಗಳ ಕಾಲ ಮಠದ ದೀರ್ಘ ಸೇವೆ ಮಾಡಿದವರು ಎಂದೂ ಹೇಳಿದರು.
ಸಮ್ಮಾನ ಸ್ವೀಕರಿಸಿದ ವಿ.ಟಿ.ಹೆಗಡೆ ಅವರು ಗುರುವಿನ ಆಶೀರ್ವಾದದಿಂದ ಕರ್ತವ್ಯ ಮಾಡಿದ್ದೇನೆ ಎಂದು ಮಠದ ಒಡನಾಟ ಬಿಚ್ಚಿಟ್ಟರು.
ವೇದಿಕೆಯಲ್ಲಿ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ನಾಗವೇಣೀ ಹೆಗಡೆ, ಎಂ.ಎನ್.ಹೆಗಡೆ ಇತರರು ಇದ್ದರು.ಮಹಾಬಲೇಶ್ವರ ಕಿರಕುಂಬತ್ತಿ ನಿರ್ವಹಿಸಿದರು. ವಿನಯ ಹೆಗಡೆ ಜಾನ್ಮನೆ ಫಲ ಸಮರ್ಪಣೆ ಮಾಡಿದರು.