ಭಟ್ಕಳ: ಅಚವೆಯಲ್ಲಿ ಏ.16ರಂದು ನಡೆಯಲಿರುವ ಗ್ರಾಮ ವಾಸ್ತವ್ಯಕ್ಕೆ ಮುಂಚಿತವಾಗಿ ಜಿಲ್ಲೆಗೆ ಬಂದಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ನಗರದಲ್ಲಿ ದಲಿತ ಮುಖಂಡರು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ತೋಡಿಕೊಂಡರು.
ಕಳೆದ 30 ವರ್ಷಗಳಿಂದ ಮೇಲ್ವರ್ಗದ ಮೀನುಗಾರ ಮೊಗೇರ ಜಾತಿಯವರು ನಮ್ಮ ಹಕ್ಕನ್ನು ಕಳೆದ ಮೂವತ್ತು ವರ್ಷಗಳಿಂದ ಹಗಲು ದರೋಡೆ ಮಾಡಿದ್ದಾರೆ. ಇವರು ಮೀನುಗಾರ ಮೊಗೇರರರು ಪ್ರವರ್ಗ-1ರಲ್ಲಿರುವ ಮೇಲ್ವರ್ಗದವರಾದರೆ ದಕ್ಷಿಣ ಕನ್ನಡದಲ್ಲಿರುವ ಮೊಲಬೇಟೆಯಾಡುವ ಪ್ರಸ್ತುತ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮೊಗೇರರು ನೈಜ ಪರಿಶಿಷ್ಟರು. ಸಂವಿಧಾನದ ಆಶಯಗಳು ಗಾಳಿಗೆ ತೂರಲಾಗಿದ್ದು ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಎಷ್ಟು ಸರಿ. ಅವರು ಕಳೆದ ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದು ಸರಕಾರ ಅವರ ಬೇಡಿಕೆ ಪರಿಶೀಲನೆ ಮಾಡುವುದಾಗಿ ಹೇಳಿದೆ. ನಮ್ಮ ಹಕ್ಕನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟುಕೊಡಲು ಸಿದ್ಧರಿಲ್ಲ ಎಂದು ದಲಿತ ಮುಖಂಡ ತುಳಸೀದಾಸ ಪಾವಸ್ಕರ್ ಅವರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಆ ತರವಾದ ದಲಿತರ ಕೋಟಾವನ್ನು ಯಾವುದೇ ರೀತಿಯಲ್ಲಿ ದುರಪಯೋಗವಾಗಲು ಸರಕಾರ ಬಿಡುವುದಿಲ್ಲ. ಸಂವಿಧಾನದಲ್ಲಿರುವ ಅಂಶಗಳನ್ನು ಗಮನಿಸಿದಾಗ ಶೇ.0.01ರಷ್ಟು ಬದಲಾವಣೆ ಮಾಡಲು ನಮಗೆ ಹಕ್ಕಿಲ್ಲ. ಯಾವುದೇ ಜಾತಿಯನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸುವುದಕ್ಕೆ ಕೂಡಾ ಹಕ್ಕಿಲ್ಲದಿರುವಾಗ ಬೇರೆ ಜಾತಿಯನ್ನು ಸೇರಿಸುವ ಪ್ರಶ್ನೆಯೇ ಇಲ್ಲ. ನೀವು ಯಾವುದೇ ಕಾರಣಕ್ಕೂ ಗಾಬರಿಯಾಗುವ ಪ್ರಶ್ನೆಯಿಲ್ಲ ಎಂದು ಹೇಳಿದರು.