ಹೊನ್ನಾವರ: ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಜ್ಞಾನ ಹೆಚ್ಚಿಸಲು ರೋಟರಿ ಕ್ಲಬ್ ಮುಂದಾಗಿದ್ದು, ಏಳು ದಿನಗಳ ಕಾಲ ಮಕ್ಕಳಿಗೆ ‘ರೈಲಾ’ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಸಮಾರೋಪ ಸಮಾರಂಭವನ್ನು ಎಂ.ಪಿ.ಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜೀವನಕ್ಕೆ ಹೊಂದಿಕೊಂಡು ಸಾಧನೆ ಮಾಡಬೇಕಿದೆ. ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಂತಹ ಶಿಬಿರ ಪರಿಣಾಮಕಾರಿಯಾಗಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಮನ್ವೇಲ್ ಸ್ಟೀಫನ್ ರೋಡ್ರಿಗೀಸ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ, ಯೋಜನಾಬದ್ಧ ತರಬೇತಿಗಳಿಂದ ಜ್ಞಾನ ವಿಕಾಸವುಂಟಾಗಿ ಮಕ್ಕಳಲ್ಲಿನ ವಿಶೇಷ ಪ್ರತಿಭೆ ಹೊರಬರಲಿದೆ. ಬೇಸಿಗೆ ಶಿಬಿರಗಳು ಮಕ್ಕಳ ವಿಶೇಷ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಮಾಡಿಕೊಡಲಿದೆ ಎಂದರು.
ಬಿಎಸ್ಎನ್ಎಲ್ ಅಧಿಕಾರಿ ಕಿರಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಯೋಗ, ಸಂಗೀತ, ನಾಟಕ, ನೃತ್ಯ, ಭಾಷಣ ಕಲೆ, ಕಾನೂನಿನ ಅರಿವು, ಪ್ರಥಮ ಚಿಕಿತ್ಸೆ, ದಂತ ರಕ್ಷಣೆ, ಸೊನ್ನೆ ಸುತ್ತ ಚಿತ್ರ ಬಿಡಿಸುವದು, ನಾಯಕತ್ವದ ಗುಣ, ಕಸದಿಂದ ರಸ, ಬೆಂಕಿ ಅಪಘಾತ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲಾಯಿತು. ಇದಲ್ಲದೇ ಒಂದು ದಿನ ಪರಿಸರದ ಅಧ್ಯಯನ ಪ್ರವಾಸ ಏರ್ಪಡಿಸಿದ್ದು, ಪರಿಸರ ರಕ್ಷಣೆ ಹಾಗೂ ಅದರಿಂದಾಗುವ ಉಪಯೋಗದ ಕುರಿತು ಮಾಹಿತಿ ನೀಡಿ ಪರಿಸರ ಪ್ರೇಮ ಮೂಡಿಸುವಲ್ಲಿಯೂ ಪ್ರಯತ್ನ ನಡೆಸಿದರು. ರೋಟರಿ ಸದಸ್ಯರು, ವಿವಿಧ ನುರಿತ ತರಬೇತಿದಾರರು ಹಾಜರಿದ್ದರು.