ಶಿರಸಿ: ಬದುಕನ್ನು ಭವ್ಯವಾಗಿ ಬದುಕಿಸಿ, ಬದುಕನ್ನು ಕಲಾಪೂರ್ಣವಾಗಿ ಅರಳಿಸುವ ಸುಂದರ ಶ್ರೀಮಂತ ಕಲೆಯೆಂದರೆ ಯಕ್ಷಗಾನ ಎಂದು ನಾಟಕಕರ್ತ, ಕಲಾವಿದ, ಜೇವರ್ಗಿ ನಾಟಕ ಕಂಪನಿಯ ಮಾಲಕ ಜೇವರ್ಗಿ ರಾಜಣ್ಣ ನುಡಿದರು.
ಅವರು ಲಯನ್ಸ್ ಕ್ಲಬ್ ಮತ್ತು ಹೊಂಗಿರಣ ಫೌಂಡೇಶನ್ ಸಹಯೋಗದಲ್ಲಿ ಲಯನ್ಸ್ ಸಭಾಭವನದಲ್ಲಿ ನಡೆದ ಯಕ್ಷಗಾನ ವಿದ್ವಾಂಸ ಪ್ರೊ.ಡಾ.ಜಿ.ಎ.ಹೆಗಡೆ ಸೋಂದಾ ಅವರ ಹತ್ತನೆಯ ಕೃತಿ ‘ಯಕ್ಷಗಾನಂ ಗೆಲ್ಗೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು .
ಕಲಾಗೌರವ ಸನ್ಮಾನವನ್ನು ಸ್ವೀಕರಿಸಿದ ಅವರು, ಶಿಕ್ಷಣತಜ್ಞ ಯಕ್ಷಗಾನ ವಿದ್ವಾಂಸರೂ ಆದ ಡಾ.ಜಿ.ಎ.ಹೆಗಡೆ ಸೋಂದಾ ಇಂತಹ ವ್ಯಕ್ತಿ ಶಿರಸಿಯಂತಹ ಊರಲ್ಲಿ ಇರುವುದೇ ಕಲಾವಿದರಿಗೆ ಹೆಮ್ಮೆಯ ವಿಷಯ ಎಂದರು.
ವಿಮರ್ಶಕ ವಿದ್ವಾನ ಗ.ನಾ.ಭಟ್ ಮೈಸೂರು ಮಾತಾಡಿ, ಡಾ.ಜಿ.ಎ.ಹೆಗಡೆ ಸೋಂದಾ ಅವರು ಶಿಕ್ಷಣ, ಸಾಹಿತ್ಯ, ಸಮಾಜಸೇವೆ ಈ ಮೂರು ಆಯಾಮಗಳಲ್ಲಿ ದುಡಿಯುತ್ತಾ ನಾಲ್ಕನೇಯ ಆಯಾಮವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಾಸಿ ವೇಷಧಾರಿಯಾಗಿ,ಉತ್ತಮ ಅರ್ಥದಾರಿಯಾಗಿ, ಯಕ್ಷಗಾನ ವಿದ್ವಾಂಸರಾಗಿ ಬೆಳೆದಿದ್ದು ಸ್ತುತ್ಯಾರ್ಹವಾಗಿದೆ. ‘ಯಕ್ಷಗಾನಂ ಗೆಲ್ಗೆ’ ಗ್ರಂಥದಲ್ಲಿ ಅವರ ವಿಶಾಲವಾದ ಚಿಂತನೆಯ ಹರಹು ಹಸನಾಗಿ ಹರಿದಿದೆ ಎಂದು ತಿಳಿಸುತ್ತಾ, ಇಂದು ಯಕ್ಷಗಾನ ಸಾಗುತ್ತಿರುವ ದಾರಿಯನ್ನು ವಿದ್ವತ್ ಪೂರ್ಣವಾಗಿ ವಿಶ್ಲೇಷಿಸಿದರು.
ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ ಕಡತೋಕಾ ಮಾತಾಡಿ, ಉತ್ತಮ ರೀತಿಯಲ್ಲಿ ಅಚ್ಚುಕಟ್ಟಾಗಿ ಸಂಘಟಿಸಿದ ಕಾರ್ಯಕ್ರಮದ ವೈಖರಿಯನ್ನು ಪ್ರಶಂಶಿಸಿದರು. ಯಕ್ಷಗಾನ ವಿದ್ವಾಂಸ ನಿವೃತ್ತ ಪ್ರಾಚಾರ್ಯ, ಕಲಾವಿದ ಡಾ.ಜಿ.ಎ.ಹೆಗಡೆ ಸೋಂದಾ ಅವರು ವಿವಿಧ ಆಯಾಮಗಳಲ್ಲಿ ಕೊಡುಗೆ ನೀಡಿದ್ದು, ಅದನ್ನು ರಾಜ್ಯದ ಹಾಗೂ ಜಿಲ್ಲೆಯ ಯಕ್ಷಗಾನ ವಲಯ ಧನಾತ್ಮಕವಾಗಿ ಗುರುತಿಸಿ ರಚನಾತ್ಮಕವಾಗಿ ಉಪಯೋಗಿಸಿಕೊಳ್ಳಬೇಕಾಗಿದೆ ಎಂದರು.
ಲಯನ್ಸ್ ನ ಪ್ರಭಾಕರ ಹೆಗಡೆ, ಗುರುರಾಜ ಹೊನ್ನಾವರ ಅತಿಥಿಗಳಾಗಿ ಉಪಸ್ಥಿತರಿದ್ದು, ಡಾ.ಜಿ.ಎ.ಹೆಗಡೆ ಅವರನ್ನು ಅಭಿನಂದಿಸಿದರು. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಅರ್ಪಿಸಿದ ಕ.ಸಾ.ಪ ಅಧ್ಯಕ್ಷ ಮಹೇಶ ಜೋಷಿ ಮುನ್ನುಡಿ ಬರೆದ 26 ವೈಚಾರಿಕ ವಿದ್ವತ್ ಪೂರ್ಣ ಲೇಖನಗಳನ್ನು ಒಳಹೂರಣವಾಗಿ ಹೊಂದಿದ ‘ಯಕ್ಷಗಾನಂ ಗೆಲ್ಗೆ’ ಗ್ರಂಥವನ್ನು ಹಿರಿಯ ಕವಿ ಜಿ.ವಿ.ಕೊಪ್ಪಲತೋಟ ಸೊಗಸಾಗಿ ಪರಿಚಯಿಸಿದರು.
ಲೇಖಕರ ಸೊಗತದಲ್ಲಿ ಡಾ.ಜಿ.ಎ.ಹೆಗಡೆ ಸೋಂದಾ, ಮಹತ್ತಾದ ಮಹಾನ್ ಕಲೆಯ ಶ್ರೇಷ್ಠತೆಗೆ ತಲೆಬಾಗಿ ಬಾಲ್ಯದಿಂದಲೂ ಯಕ್ಷಗಾನದತ್ತ ಒಲವು ಹೊಂದಿ ಉಡುಪಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಪರಿಣಾಮ, ಅಳಿಲಸೇವೆಯಾಗಿ ಕಲಾಸೇವೆಗೈಯ್ಯಲು ಕಾರಣವಾಯಿತು ಎಂದು ವಿನಮ್ರರಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷ ಉದಯಸ್ವಾದಿ, ಕ್ಲಬ್ನ 48 ವರ್ಷಗಳ ಇತಿಹಾಸದಲ್ಲಿ ನಮ್ಮ ಕ್ಲಬ್ನ ಮಾಜಿ ಅಧ್ಯಕ್ಷರೂ, ಯಕ್ಷಗಾನ ವಿದ್ವಾಂಸರೂ ಆದ ಡಾ.ಜಿ.ಎ.ಹೆಗಡೆ ಅವರ ಇಂತಹ ಉತ್ತಮ ಗ್ರಂಥ ಬಿಡುಗಡೆ ಆದದ್ದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಡಾ.ಹೆಗಡೆ ಅವರು ನಮ್ಮ ಕ್ಲಬ್ನ ಹೆಮ್ಮೆ ಎಂದರು.
ಆರಂಭದಲ್ಲಿ ಕಾರ್ಯದರ್ಶಿ ವಿನಯ ಹೆಗಡೆ ಸ್ವಾಗತಿಸಿದರು. ಅನಿತಾ ಹೆಗಡೆ ಸಂದೇಶ ವಾಚಿಸಿದರೆ, ತ್ರಿವಿಕ್ರಮ್ ಪಟವರ್ಧನ್ ಸನ್ಮಾನ ಪತ್ರ ವಾಚಿಸಿದರು. ಗ್ರಂಥ ಲೋಕಾರ್ಪಣೆಯ ನಂತರ ಯಕ್ಷಗಾನ ಕ್ಷೇತ್ರ ವಿಸ್ತರಣೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಕವಿ ಕೃಷ್ಣ ಪದಕಿ, ಕವಯಿತ್ರಿ ಪ್ರತಿಭಾ ಎಂ.ನಾಯ್ಕ್ ಕಾರ್ಯಕ್ರಮವನ್ನು ಸೊಗಸಾಗಿ ನಿರ್ವಹಿಸಿದರು.