ಶಿರಸಿ: ಇತ್ತೀಚಿಗೆ ಅಲ್ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ವಿಡಿಯೋ ಹೇಳಿಕೆಯೊಂದನ್ನ ಬಿಡುಗಡೆ ಮಾಡಿ, ಸಾರ್ವಜನಿಕವಾಗಿ ‘ಅಲ್ಲಾ ಹು ಅಕ್ಬರ್’ ಘೋಷಣೆ ಕೂಗಿದ್ದ ಮಂಡ್ಯ ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳನ್ನ ಪ್ರಶಂಸಿಸಿದ್ದ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಈತನ ಹೇಳಿಕೆಯಿಂದ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಸಂಸದ ಅನಂತಕುಮಾರ ಹೆಗಡೆ ಮುಖ್ಯಮಂತ್ರಿಗೆ ಪತ್ರವೊಂದನ್ನು ಬರೆದು, ಯುವತಿಯ ಹಿನ್ನೆಲೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಸಂಸದ ಹೆಗಡೆ ಬರೆದ ಪತ್ರದಲ್ಲೇನಿದೆ?: ‘ಈ ಹಿಂದೆ ಹಿಜಾಬ್ ವಿವಾದ ತಾರಕ್ಕೇರಿದ್ದ ಸಂದರ್ಭದಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಇದಕ್ಕುತ್ತರವಾಗಿ ಬೀಬಿ ಮುಸ್ಕಾನ್ ಎಂಬ ಬುರ್ಖಾಧಾರಿ ವಿದ್ಯಾರ್ಥಿನಿಯು ‘ಅಲ್ಲಾ ಹೂ ಆಕ್ಟರ್’ ಎಂದು ಕೂಗಿದ್ದ ವಿಡಿಯೋ ಜಗತ್ತಿನೆಲ್ಲಡೆ ಪ್ರಮುಖ ನ್ಯೂಸ್ ಚಾನೆಲ್ಗಳಲ್ಲಿ ಪ್ರಸಾರವಾಗಿ, ಸದರಿ ವಿದ್ಯಾರ್ಥಿನಿಯು ದಿಢೀರ್ ಪ್ರಸಿದ್ಧಿಯನ್ನು ಪಡೆದಿದ್ದ ಘಟನೆ ನಡೆದಿತ್ತು. ಈ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಸಂಘಟನೆಗಳಿಂದ ಪ್ರಶಂಸೆಯ ನುಡಿಗಳು ಹಾಗೂ ಬಹುಮಾನಗಳ ಘೋಷಣೆ ಮಾಡಲಾಗಿತ್ತು. ಹೀಗಿರುವಾಗ ನಿಷೇಧಿತ ಮುಸ್ಲಿಂ ಭಯೋತ್ಪಾದಕ ಸಂಘಟನೆಯಾದ ಆಲ್-ಖೈದಾದ ಮುಖ್ಯಸ್ಥನಾದ ಆಯಮನ್-ಅಲ್-ಜವಾಹರಿ ಇತ್ತೀಚೆಗೆ ಈ ವಿದ್ಯಾರ್ಥಿನಿಯ ಕುರಿತು ‘ಭಾರತದ ಸರ್ವಶ್ರೇಷ್ಠ ಮಹಿಳೆ’ ಎಂದು ಹೊಗಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ’.
‘ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ತೀರ್ಪು ನೀಡಿದ್ದರೂ ಸಹಿತ ಹಲವಾರು ರಾಜಕಾರಣಿಗಳು, ಮೂಲಭೂತವಾದಿ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿರುತ್ತಾರೆ. ಹಿಜಾಬ್ ಪ್ರತಿಭಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಉಚ್ಛ ನ್ಯಾಯಲಯ ಪೀಠವು ಅಭಿಪ್ರಾಯ ವ್ಯಕ್ತಪಡಿಸಿರುವುದು ಇಲ್ಲಿ ಉಲ್ಲೇಖನೀಯವಾಗಿದೆ. ಕಾರಣ ಬೀಬಿ ಮುಸ್ಕಾನ್ ವಿದ್ಯಾರ್ಥಿನಿಗೆ ಹಿಜಾಬ್ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಇರುವ ಸಂಬಂಧದ ಕುರಿತಂತೆ ಕೂಲಂಕುಷವಾದ ತನಿಖೆ ನಡೆಸಬೇಕು’ ಎಂದು ಸಂಸದ ಹೆಗಡೆ ಪತ್ರದಲ್ಲಿ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.