ಶಿರಸಿ: ಇಂದಿನ ಜನತೆಯಲ್ಲಿ ಅಧ್ಯಯನಶೀಲತೆ ದೂರವಾಗಿದೆ. ಶಾಲೆಗಳಲ್ಲಿ ಗ್ರಂಥಾಲಯದ ಬಾಗಿಲು ತೆಗೆಯುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಆ ನಿಟ್ಟಿನಲ್ಲಿ ಉತ್ತಮ ಪುಸ್ತಕಗಳನ್ನು ಓದುವ ರೂಢಿ ನಾವೆಲ್ಲ ಬೆಳೆಸಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎನ್ ಎಸ್ ಹೆಗಡೆ ಕುಂದರಗಿ ಹೇಳಿದರು.
ನಗರದ ವಿನಾಯಕ ಸಭಾಂಗಣದಲ್ಲಿ ಎಸ್ ಆರ್ ಕಡವೆ ಅಭ್ಯುದಯ ಸಂಸ್ಥೆ ಆಶ್ರಯದಲ್ಲಿ ನಡೆದ ಡಾ. ರಾಮಚಂದ್ರ ಹೆಗಡೆ ಭಂಡಿಮನೆಯವರ ಕೃತಿ ‘ADDING HEALTHY YEARS BEYOND RETIREMENT’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ, ಆಂಗ್ಲಭಾಷೆಯಲ್ಲಿ ಇತ್ತೀಚೆಗೆ ಮೌಲ್ಯಯುತ ಪುಸ್ತಕಗಳು ಸಾಕಷ್ಟು ಬಂದಿವೆ. ಅವುಗಳ ಓದುವಿಕೆಯಲ್ಲಿ ನಮ್ಮ ಗಮನವಿರಬೇಕು ಎಂದರು.
ಪುಸ್ತಕದ ಕರ್ತೃ ರಾಮಚಂದ್ರ ಹೆಗಡೆ ಭಂಡಿಮನೆ ಮಾತನಾಡಿ, ಈ ಪುಸ್ತಕದಲ್ಲಿ ನನಗೆ ತಿಳಿದಿರುವ ವಿಷಯವನ್ನು ಕೇವಲ ಪ್ರಸ್ತುತ ಪಡಿಸುವ ಕೆಲಸ ಮಾಡಿದ್ದೇನೆ. ದೈಹಿಕದ ಜೊತೆಗೆ ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ನಡಿಗೆಯಿಂದ ಮನುಷ್ಯ ಸದಾ ಚೈತನ್ಯಯುಕ್ತನಾಗಿರುತ್ತಾನೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಎನ್.ಜಿ. ಹೆಗಡೆ ಮಾದಪ್ಪನ್ ಕರ್ಕಿ ಮಾತನಾಡಿ, ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ. ಆದರೆ ಇಂದಿನ ಕಾಲದಲ್ಲಿ ಇಂಟರ್ ನೆಟ್ ಮೂಲಕ ಸಾಕಷ್ಟು ಅವಕಾಶವಿದ್ದರೂ ಪುಸ್ತಕವನ್ನು ಓದುವುದೇ ಕಷ್ಟಸಾಧ್ಯವಾಗಿದೆ. ನಾವು ಓದುವ ಪುಸ್ತಕದಿಂದ ಜೀವನದ ಮಹೋನ್ನತ ನಿರ್ಧಾರಗಳು ರೂಪುಗೊಳ್ಳುತ್ತವೆ. ಮುಂದಿನ ಪೀಳಿಗೆಗೆ ಪುಸ್ತಕ ಓದಿಸುವ ರೂಢಿಯನ್ನು ನಾವು ಬೆಳೆಸಬೇಕಿದೆ. ಕಲಿಕೆಯೆನ್ನುವುದು ನಿರಂತರ. ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಜೀವನವನ್ನು ಸಾರ್ಥಕತೆಗೊಳಿಸೋಣ ಎಂದರು.
ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಮಾತನಾಡಿ, ರಾಮಚಂದ್ರ ಹೆಗಡೆಯವರು ಬರೆದಿರುವ ಪುಸ್ತಕದ ಮಾರಾಟದಿಂದ ಬರುವ ಹಣವನ್ನು ಶಿರಸಿ ನಗರದಲ್ಲಿರುವ ಮಹದೇವ ಭಟ್, ಕೂರ್ಸೆ ಕಿವುಡು ಮಕ್ಕಳ ವಸತಿ ಶಾಲೆ ಮತ್ತು ಅಜಿತ ಮನೋಚೇತನ ಮಕ್ಕಳ ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡುವ ವಿಚಾರ ಉತ್ತಮವಾದುದು. ಪುಸ್ತಕ ಎಲ್ಲಿಯೇ ಮಾರಾಟವಾದರೂ ಸಹ ನಮ್ಮ ಪ್ರದೇಶದ ಮಕ್ಕಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರಾಮಚಂದ್ರ ಹೆಗಡೆ ಭಂಡಿಮನೆ ಕಾರ್ಯ ಶ್ಲಾಘನೀಯ ಎಂದರು.
ಎಸ್.ಆರ್. ಹೆಗಡೆ ಕಡವೆ ಅಭ್ಯುದಯ ಸಂಸ್ಥೆ ಅಧ್ಯಕ್ಷ, ಟಿಎಸ್ಎಸ್ ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ ಸ್ವಾಗತಿಸಿದರು. ಸಹಕಾರಿ ಧುರೀಣ ಶ್ರೀಪಾದ ಹೆಗಡೆ ಕಡವೆ ಆಗಮಿಸಿದ ಅತಿಥಿಗಳನ್ನು ಪರಿಚಯಿಸಿದರು. ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಎಸ್.ಪಿ. ಹೆಗಡೆ ಪುಸ್ತಕದ ಕುರಿತು ಸಮಗ್ರ ಮಾಹಿತಿ ನೀಡಿದರು. ಟಿಆರ್ಸಿ ಸಂಸ್ಥೆಯ ಜಿ ಜಿ ಹೆಗಡೆ ನಿರೂಪಿಸಿ, ವಂದಿಸಿದರು.