ಯಲ್ಲಾಪುರ: ಯಕ್ಷಗಾನದ ಕುರಿತು ಸಮಗ್ರ ಮಾಹಿತಿಯುಳ್ಳ ‘ಯಕ್ಷಗಾನ ಗಾನ ಸಂಹಿತೆ’ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ಏ.17 ರಂದು ಸಂಜೆ 4 ಕ್ಕೆ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ನಡೆಯಲಿದೆ ಎಂದು ಕೃತಿಕಾರ ಹಾಗೂ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಂಥವನ್ನು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಲಿದ್ದಾರೆ. ವಿದ್ವಾನ್ ಉಮಾಕಾಂತ ಭಟ್ಟ ಕೃತಿ ಪರಿಚಯಿಸಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಸಂಘಟಕ ಆರ್.ಜಿ.ಭಟ್ಟ ವರ್ಗಾಸರ, ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಅರ್ಥದಾರಿ ಎಂ.ಎನ್.ಹೆಗಡೆ ಹಳವಳ್ಳಿ ಭಾಗವಹಿಸಲಿದ್ದಾರೆ. ನಂತರ ಪ್ರಮದಾ ಉಪಾಧ್ಯಾಯ ಅವರಿಂದ ಕಥಕ್ ನೃತ್ಯ ಪ್ರದರ್ಶನ, ಯಕ್ಷರಾಗ ರಸರಂಜನೀ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಮುಖರಾದ ಡಾ.ಶಂಕರ ಭಟ್ಟ ಬಾಲೀಗದ್ದೆ, ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಡಾ.ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ, ವೆಂಕಟ್ರಮಣ ಹೆಗಡೆ ತೊಂಡೆಕೆರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಂಥದಲ್ಲೇನಿದೆ?
ಯಕ್ಷಗಾನ ಗಾನ ಸಂಹಿತೆ ಗ್ರಂಥದಲ್ಲಿ ಯಕ್ಷಗಾನದ ಕುರಿತಾದ ಪರಿಚಯ, ಹಿನ್ನೆಲೆಯ ವಿವರವಿದ್ದು ಯಕ್ಷಗಾನದಲ್ಲಿನ ರಾಗ, ಮಟ್ಟುಗಳ ಶಾಸ್ತ್ರೀಯ ಕಲಿಕೆಗೆ ಪೂರಕವಾದ ಅಂಶಗಳು, ರಸೋಚಿತ ರಾಗಗಳ ಬಳಕೆ, ವಿಶೇಷ ರಾಗಗಳ ಕುರಿತು ಮಾಹಿತಿಯನ್ನು ಕೃತಿ ಹೊಂದಿದೆ. ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳ ಹಾಗೂ ಮುಮ್ಮೇಳದವರ ಪಾತ್ರ, ಹಿಂದಿನ ಕಲಾವಿದರು ಬಳಸುತ್ತಿದ್ದ ಮುದ್ರೆಗಳ ಕುರಿತಾದ ಮಾಹಿತಿಯೂ ಕೃತಿಯಲ್ಲಿದೆ.
ಅದಲ್ಲದೇ ವಿಶೇಷವಾಗಿ ಯಕ್ಷಗಾನದಲ್ಲಿ ಬಳಸುವ 110 ರಾಗಗಳ ಸ್ವರಪ್ರಸ್ತಾರವನ್ನು ವಿದ್ವಾನರು ಕೃತಿಯಲ್ಲಿ ಬರೆದಿದ್ದಾರೆ. ಭರತಾಗಮನ ಪ್ರಸಂಗದ ಸಾಹಿತ್ಯಕ್ಕೆ ಸ್ವರ ಪ್ರಸ್ತಾರ ಹಾಕಿದ್ದು, ಯಕ್ಷಗಾನದ ಪೂರ್ವರಂಗದ ಪದ್ಯಗಳಿಗೂ ಸ್ವರ ಪ್ರಸ್ತಾರ ಹಾಕಿ ಒಟ್ಟು 422 ಪುಟಗಳ ಈ ಅಪರೂಪದ ಗ್ರಂಥ ಹೊರತಂದಿದ್ದಾರೆ.