
ಶಿರಸಿ: ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ ಬೆಂಗಳೂರು ವತಿಯಿಂದ ಪ್ರದಾನ ಮಾಡುವ ರಾಜ್ಯಮಟ್ಟದ ‘ಶಿಕ್ಷಣ ಸಿರಿ’ ಪ್ರಶಸ್ತಿಗೆ ಶ್ರೀ ಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಸಂತ ಹೆಗಡೆ ಚಿಕ್ಕೊತ್ತಿ ಆಯ್ಕೆಯಾಗಿದ್ದಾರೆ.
ಏ.10 ರಂದು ಮುಂಜಾನೆ 10.30 ಕ್ಕೆ ಶಿರಸಿಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಸಂತ ಹೆಗಡೆ ಶ್ರೀ ಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದು, ತಮ್ಮ ಆಗಸ್ 360 ಎಂಬ ಸಂಸ್ಥೆ ಮೂಲಕ ಕಳೆದ ಹಲವಾರು ವರ್ಷಗಳಿಂದ ಖಗೋಳ ದರ್ಶನ ಕಾರ್ಯಕ್ರಮದ ಮೂಲಕ ರಾಜ್ಯದೆಲ್ಲೆಡೆ ಚಿರಪರಿಚಿತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕಾ ವಿಷಯದೆಡೆಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ವಿಭಿನ್ನ ಕಾರ್ಯಚಟುವಟಿಕೆಯನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ.
ಶ್ರೀ ಶಾರದಾಂಬಾ ಪ್ರೌಢಶಾಲೆಯೂ ಸಹ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ, ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ, ಪಾಲಕರ ಹಾಗು ಸಮಾಜದ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ವಸಂತ ಹೆಗಡೆಗೆ ಶಾಲೆಯ ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿ ಸೇರಿದಂತೆ ಹಲವರು ಶುಭಕೋರಿದ್ದಾರೆ.