ಶಿರಸಿ: ತಾಲ್ಲೂಕಿನ ಬನವಾಸಿಯ ಉಮಾಮಧುಕೇಶ್ವರ ದೇವರ ರಥೋತ್ಸವ ಏ.11, 12 ರಂದು ನಡೆಯಲಿದ್ದು ದೇವಸ್ಥಾನದ ಸಮೀಪದ ಕಟ್ಟಡ ಅಥವಾ ನಿವೇಶನಗಳಲ್ಲಿ ಹಿಂದೂಯೇತರರಿಗೆ ಮಳಿಗೆ ಗುತ್ತಿಗೆ ಅಥವಾ ಬಾಡಿಗೆ ನೀಡದಿರಲು ದೇವಸ್ಥಾನದ ಸಮಿತಿ ನಿರ್ಧರಿಸಿದೆ.
‘ದೇವಸ್ಥಾನದ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳು ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ’ ಎಂಬ ಬ್ಯಾನರ್ ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದೆ.
ರಥೋತ್ಸವದ ಸಂದರ್ಭದಲ್ಲಿ ನೂರಾರು ಮಳಿಗೆಗಳನ್ನು ತೆರೆಯಲಾಗುತ್ತದೆ. ಆದರೆ, ಈ ಬಾರಿ ಹಿಂದೂ ಧರ್ಮೀಯರಿಗೆ ಮಾತ್ರ ಅವಕಾಶ ನೀಡುವುದಾಗಿ ಸಮಿತಿ ತಿಳಿಸಿದೆ.
‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ನಿಯಮದ ಅನ್ವಯ ಹಿಂದೂಯೇತರರಿಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಹಿಂದೂಗಳಲ್ಲದವರಿಗೆ ರಥೋತ್ಸವದ ವೇಳೆ ಮಳಿಗೆ ತೆರೆಯಲು ಅವಕಾಶ ನೀಡದಿರಲು ನಿರ್ಣಯಿಸಿದ್ದೇವೆ’ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.