ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯದ ವತಿಯಿಂದ ಸಂಸ್ಥೆಯ ಆವಾರದಲ್ಲಿ ಭಾನುವಾರ ನಡೆದ ಶಿಕ್ಷಕರ ಉದ್ಯೋಗ ಮೇಳ ೩೬ ಅಭ್ಯರ್ಥಿಗಳಿಗೆ ನೇರವಾಗಿ ಉದ್ಯೋಗ ಒದಗಿಸಲಾಗಿದೆ.
ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ೮ಕ್ಕೂ ಅಧಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಉದ್ಯೋಗ ಮೇಳಕ್ಕೆ ಆಗಮಿಸಿ ಅಭ್ಯರ್ಥಿಗಳ ಸಂದರ್ಶನ ಮಾಡಿದರು. ಅಭ್ಯರ್ಥಿಗಳು ತಮ್ಮ ಇಷ್ಟದ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆಯ ಮೇರೆಗೆ ಸಂದರ್ಶನಕ್ಕೆ ಹಾಜರಾದರು. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ತಮಗೆ ಅರ್ಹ ಎನಿಸಿದ ಅಭ್ಯರ್ಥಿಗಳನ್ನು ಆರಿಸಿ ನೇಮಕಾತಿ ಪ್ರಕ್ರಿಯೆ ನಡೆಸಿದರು.
ಶಿಕ್ಷಕ ಅಭ್ಯರ್ಥಿಗಳ ಕಲಿಕಾ ಮಾದರಿ ಪರೀಕ್ಷಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು, ಪ್ರತಿಭೆಗೆ ತಕ್ಕ ಉದ್ಯೋಗ ನೀಡುವುದು ಸಂಸ್ಥೆಯ ಧ್ಯೆಯವಾಗಿದೆ. ಹೀಗಾಗಿ ಶಿಕ್ಷಕರಿಗಾಗಿ ಉದ್ಯೋಗ ಮೇಳ ಆಯೋಜಿಸಿ ಇಲ್ಲಿನ ಶಿಕ್ಷಕರು ರಾಜ್ಯದ ವಿವಿಧಡೆ ಉದ್ಯೋಗ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಮಾತನಾಡಿ, ಉತ್ತಮ ಶಿಕ್ಷಕರಿಗೆ ಉತ್ತಮ ಉದ್ಯೋಗ ದೊರಕಿಸಿಕೊಡುವುದು ಸಾಮಾಜಿಕ ಹಿತದೃಷ್ಟಿ ವತಿಯಿಂದ ಅಗತ್ಯ ಎನಿಸಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಅದು ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದರು. ಪ್ರಮುಖರಾದ ಡಾ. ದತ್ತಾತ್ರೇಯ ಗಾಂವ್ಕರ್, ಪ್ರಸನ್ನ ಭಟ್ಟ, ರವೀಂದ್ರ ಶರ್ಮಾ, ಕವಿತಾ ಹೆಬ್ಬಾರ್, ರಾಜು ಆಗೇರ್ ಮೊದಲಾದವರು ಇದ್ದರು.
36 ಶಿಕ್ಷಕರಿಗೆ ಉದ್ಯೋಗ; ‘ವಿಶ್ವದರ್ಶನ’ದಲ್ಲಿ ಯಶಸ್ಸು ಕಂಡ ಉದ್ಯೋಗ ಮೇಳ
