ಯಲ್ಲಾಪುರ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಇಬ್ಬನಿ ಫೌಂಡೇಷನ್ ಮಾಗೋಡ ಇವರ ಆಶ್ರಯದಲ್ಲಿ ಮಾಗೋಡ ಹಾದಿಮನೆಯ ಈಶಾವಾಸ್ಯಂ ಸಭಾಭವನದಲ್ಲಿ ಹಿರಿಯರ ಸಂಸ್ಮರಣೆ ಹಾಗೂ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.
ಹಿರಿಯರಾದ ನರಸಿಂಹ ಭಟ್ಟ ಕೆರೆಪಾಲ ಕಾರ್ಯಕ್ರಮ ಉದ್ಘಾಟಿಸಿದರು.
ಯಕ್ಷಗಾನ ಕಲಾವಿದ ದಿ.ಸುಬ್ರಾಯ ಜೋಶಿ ಅವರ ಕುರಿತು ಸಂಸ್ಮರಣಾ ನುಡಿಗಳನ್ನಾಡಿದ ಅರ್ಥಧಾರಿ ನರಸಿಂಹ ಭಟ್ಟ ಕುಂಕಿಮನೆ, ಹಿರಿಯ ಕಲಾವಿದರ ಆದರ್ಶ ಈಗಿನ ಕಲಾವಿದರಿಗೆ ಮಾರ್ಗದರ್ಶಿಯಾಗಿದೆ. ದಿ.ಸುಬ್ರಾಯ ಜೋಶಿ ಪುಂಡು ವೇಷಗಳಿಗೆ ಹೆಸರಾಗಿದ್ದರು. ಯಾವುದೇ ಪಾತ್ರವನ್ನು ತನ್ನದೇ ಆದ ಶೈಲಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮನೆಮಾತಾಗಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ಯಕ್ಷಗಾನ ಹೊಸತನದತ್ತ ಮುಖ ಮಾಡಿದ್ದರೂ ಮೂಲ ಸ್ವರೂಪವನ್ನು ಕಳೆದುಕೊಂಡಿಲ್ಲ. ಹಿರಿಯ ಕಲಾವಿದರ ಬದುಕು, ಆದರ್ಶಗಳನ್ನು ಯುವ ಕಲಾವಿದರಿಗೆ ತಿಳಿಯಪಡಿಸಲು ಇಂತಹ ಸಂಸ್ಮರಣಾ ಕಾರ್ಯಕ್ರಮಗಳು ಸಹಕಾರಿ ಎಂದರು.
ಇಬ್ಬನಿ ಫೌಂಡೇಷನ್ ಗೌರವಾಧ್ಯಕ್ಷ ನರಸಿಂಹ ಹೆಗಡೆ ಹಾದಿಮನೆ ಅಧ್ಯಕ್ಷತೆ ವಹಿಸಿದ್ದರು. ಇಬ್ಬನಿ ಫೌಂಡೇಷನ್ ಸದಸ್ಯ ಶ್ರೀನಿವಾಸ ಹೆಗಡೆ ನಿರ್ವಹಿಸಿದರು.
ನಂತರ ಸ್ಥಳೀಯ ಕಲಾವಿದರಿಂದ ಜಾಂಬವತಿ ಕಲ್ಯಾಣ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶಶಾಂಕ ಬೋಡೆ, ಮದ್ದಲೆವಾದಕರಾಗಿ ರಾಘವೇಂದ್ರ ಭಟ್ಟ ಹಂಡ್ರಮನೆ ಭಾಗವಹಿಸಿದ್ದರು. ಕೃಷ್ಣನಾಗಿ ನರಸಿಂಹ ಭಟ್ಟ ಕುಂಕಿಮನೆ, ಜಾಂಬವನಾಗಿ ವೇ.ಶಿವರಾಮ ಭಟ್ಟ ಮೊಟ್ಟೆಗದ್ದೆ, ಬಲರಾಮನಾಗಿ ಶ್ರೀಧರ ಅಣಲಗಾರ, ನಾರದನಾಗಿ ವೇ.ಮಂಜುನಾಥ ಜೋಶಿ ಪಾತ್ರಚಿತ್ರಣ ನೀಡಿದರು.