ಶಿರಸಿ: ಸಹಕಾರಿ ಕ್ಷೇತ್ರದಲ್ಲಿ ನಿಷ್ಠಾವಂತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ, ಶಿಸ್ತು, ಪ್ರಾಮಾಣಿಕತೆಯಿಂದಲೇ ಹೆಸರುವಾಸಿಯಾಗಿರುವ ಇಲ್ಲಿನ ಪ್ರತಿಷ್ಠಿತ ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ ಇವರಿಗೆ ರಾಜ್ಯ ಸರಕಾರ ನೀಡುವ ಸಹಕಾರಿ ರತ್ನ ಪ್ರಶಸ್ತಿ ಲಭಿಸಿದೆ.
ಹುಳಗೋಳ ಸೊಸೈಟಿ ಮೂಲಕ 1980ರ ದಶಕದಲ್ಲೇ ಸಹಕಾರಿ ಸೇವೆಯಲ್ಲಿ ತೊಡಗಿಸಿಕೊಂಡ ಶಂಭುಲಿಂಗ ಹೆಗಡೆ, ಬಳಿಕ ತಾರಗೋಡ ಹಾಲು ಸೊಸೈಟಿ, ಧಾರವಾಡ ಹಾಲು ಒಕ್ಕೂಟ, ಕೆಎಂಎಫ್ , ಶಿರಸಿಯ ಡೆವಲಪ್ಮೆಂಟ್ ಸೊಸೈಟಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದವರು.
ಪ್ರಸ್ತುತ, ರೈತರ ಜೀವನಾಡಿಯಾಗಿ ವೈವಿಧ್ಯಮಯ ಕಾರ್ಯಚಟುವಟಿಕೆ, ಮಾರುಕಟ್ಟೆ ವ್ಯವಸ್ಥೆ ನಡೆಸಿಕೊಂಡು ಬಂದಿರುವ ಖ್ಯಾತ ಕದಂಬ ಮಾರ್ಕೆಟಿಂಗ್ ಅಧ್ಯಕ್ಷರಾಗಿರುವ ಇವರು ಎರಡನೇ ಅವಧಿಗೆ, ಅಡಿಕೆ ಮಾರಾಟ ವ್ಯವಹಾರದ ಬೃಹತ್ ಸಂಸ್ಥೆಯಾದ ಕ್ಯಾಂಸ್ಕೋ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
1972ರಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿರುವ ಶಂಭುಲಿಂಗ ಹೆಗಡೆ, 1978ರ ತುರ್ತು ಪರಿಸ್ಥಿತಿಯಲ್ಲೂ ಪೂರ್ಣಾವಧಿ ಕಾರ್ಯಕರ್ತರಾಗಿ ಶ್ರಮಿಸಿದ್ದರು. ಭಾರತೀಯ ಜನತಾ ಪಾರ್ಟಿಯಲ್ಲಿಯೂ ಹಲವು ಹಂತದ ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.