ಶಿರಸಿ:ಚವತ್ತಿ ಕಾನಗೋಡ ಕೆರೆಮನೆಯ ತಬಲಾ ವಾದಕ ಹಾಗೂ ಛಾಯಾಗ್ರಾಹಕ ಕಿರಣ ಹೆಗಡೆಯವರ ಮನೆಯಂಗಳದಲ್ಲಿ ಏರ್ಪಡಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮ ಸ್ವರ ಸಮ್ಮಿಲನ ಸಂಗೀತಭಿಮಾನಿಗಳಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಶಿರಸಿಯ ಜನನಿ ಮ್ಯೂಸಿಕ ಸಂಸ್ಥೆಯ ಸಹಕಾರದೊಂದಿಗೆ ನಡೆದ ಸ್ವರ ಸಮ್ಮಿಲನವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಶರ್ಮಾ ಭಟ್ಟ ರವರು ಮಾತನಾಡಿ ವೇದಗಳ ಕಾಲದಿಂದಲೂ ಸಂಗೀತಕ್ಕೆ ಅತ್ಯಂತ ಮಹತ್ವವಿದೆ. ಪ್ರತಿಯೊಂದು ಕಲಾ ಪ್ರಕರಣಗಳು ಮೂಲ ಸಂಗೀತವಾಗಿದ್ದು ಮನುಷ್ಯನನ್ನು ಉತ್ತುಂಗಕ್ಕೆ ಕರೆದೊಯ್ಯುವ ಅಗಾಧವಾದ ಶಕ್ತಿ ಇದರಲ್ಲಿದೆ. ಎಕಾಗ್ರತೆಯನ್ನು ಬೆಳೆಸಿ ಜೀವನದ ಗುರಿಮುಟ್ಟಿಸುವಲ್ಲಿ ಸಂಗೀತಾಭ್ಯಾಸ ಆಲಿಸುವಿಕೆ ಹೆಚ್ಚಿನ ಸಹಕಾರಿಯಾಗುತ್ತದೆ ಎಂದರು.
ನಂತರ ಮಾತನಾಡಿದ ಬಿ.ಜೆ.ಪಿ.ರಾಜ್ಯ ಕಾರ್ಯಕಾರಿ ಸದಸ್ಯೆ ರೇಖಾ ಹೆಗಡೆ ಕಂಪ್ಲಿ ವಿದ್ಯಾರ್ಥಿಗಳು ಶಾಲಾ ಪಠ್ಯಕ್ರಮದೊಂದಿಗೆ ಶಾಸ್ತ್ರೀಯ ಬದ್ದವಾದ ಕಲೆ ಸಂಸ್ಕ್ರತಿಯನ್ನು ಮೈಗೂಡಿಸಿಕೊಂಡಾಗ ಪ್ರತಿಯೊಂದು ಹಂತದಲ್ಲಿ ಯಶಸ್ಸು ದೊರೆಯುತ್ತದೆ, ಎಲ್ಲ ವ್ಯಕ್ತಿಗಳಲ್ಲಿ ಅವರದ್ದೆ ಆದ ಪ್ರತಿಭೆ ಇದ್ದು ಆ ಪ್ರತಿಭೆ ಅನಾವರಣವಾದಾಗ ಸಮಾಜ ಕೂಡಾ ತಲೆದೂಗುತ್ತದೆ. ಇಂತಹ ಕಾರ್ಯಕಾಡುತ್ತಿರುವ ಜನನಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಅತಿಥಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಸುಧೀರ ಪಿ.ಬಲ್ಸೆ ಚವತ್ತಿ ಮತ್ತು ಕೆರೆಮನೆಯ ರಾಮಚಂದ್ರ ಸುಬ್ರಾಯ ಹೆಗಡೆ ಶುಭ ಹಾರೈಸಿದರು.
ಸ್ವರ ಸಮ್ಮಿಲನದ ಮೊದಲ ಹಂತವಾಗಿ ಯುವ ಪ್ರತಿಭೆಗಳಾದ ಸಂಪದಾ ಸತೀಶ ಹಾಗೂ ಸ್ನೇಹಾ ಅಮ್ಮಿನಳ್ಳಿ ತಮ್ಮ ಗಾಯನ ಪ್ರಸ್ಥುತ ಪಡಿಸಿದರು. ಇದಕ್ಕೆ ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್ ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ ಸಾಥ ನೀಡಿದರು.
ನಂತರ ನಡೆ ಗಾಯನದಲ್ಲಿ ಬೆಂಗಳೂರಿನ ಅನಿರುದ್ಧ ಐತಾಳರವರು ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ರಾಗ, ಪೂರಿಯಾ ಹಾಡಿ, ರಂಗಗೀತೆ, ಮತ್ತು ದಾಸರ ಪದಗಳನ್ನು ಪ್ರಸ್ತುತಗೊಳಿಸಿದರು. ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾಗೂ ಸಂವಾದಿನಿಯಲ್ಲಿ ಹೆಗ್ಗಾರ್ ಸತೀಶ ಭಟ್ಟ, ನಯನಾ ಹೆಗಡೆ ಸಂಪದಾ ಹೆಗಡೆ ತಾಳದಲ್ಲಿ ಅನಂತ ಮೂರ್ತಿ ಸಹಕರಿಸಿದರು.
ಸ್ವರ ಸಮ್ಮಿಲನದ ಅಂಗವಾಗಿ ಆಯೋಜಿಸಿದ್ದ ಹಾರ್ಮೋನಿಯಂ ಸೋಲೋದಲ್ಲಿ ಬೆಳಗಾವಿಯ ಸಾರಂಗ ಕುಲ್ಕರ್ಣಿಯವರು ಸೊಗಸಾಗಿ ಹಾರ್ಮೋನಿಯಂ ನುಡಿಸಿ ಕಿಕ್ಕಿರಿದ ಸಭೆಯ ಕರತಾಡನಕ್ಕೆ ಭಾಜನರಾದರು. ಇದೇ ಸಂದರ್ಭದಲ್ಲಿ ತಬಲಾದಲ್ಲಿ ಧಾರವಾಡದ ಡಾ. ಶ್ರೀಹರಿ ದಿಗ್ಗಾವಿಯವರು ಸಾಥ ನೀಡಿದರು. ಸ್ವರ ಸಮ್ಮಿಲನ ಕಾರ್ಯಕ್ರಮದ ಕೊನೆಯ ಹಂತವಾಗಿ ಗಾಯಕಿ ಶ್ರೀಮತಿ ರೇಖಾ ದಿನೇಶರವರು ಸಂಗೀತ ಕಛೇರಿ ನಡೆಸಿಕೊಟ್ಟು ಆರಂಭದಲ್ಲಿ ರಾಗ ಜೋಗ್ ಕಂಸೌ ವಿಸ್ತಾರಗೊಳಿಸಿದರು.
ನಂತರದಲ್ಲಿ ಕವಿ ಶ್ರೀಧರ ಮಂಗಳೂರುರವರ ಸಾಹಿತ್ಯದ ಬರದೆ ಹೋಗಲು ಕಾಯವೆ ನಿಲಿಯೆ ಕೃತಿಯೊಂದನ್ನು ಹಾಡುತ್ತ ಭಕ್ತಿ ಪ್ರಧಾನವಾದ ಗೋಪಿಯ ಭಾಗ್ಯವಿದು ಎಂಬ ಜನಪ್ರಿಯ ಹಾಡನ್ನು ಹಾಡುತ್ತ ರಾಗ ಬೈರವಿಯಲ್ಲಿ ತರಾನಾ ಪ್ರಸ್ಥುತಗೊಳಿಸಿ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ರೇಖಾರವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಸಾರಂಗ ಕುಲ್ಕರ್ಣಿ ಮತ್ತು ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಧಾರವಾಡ ಹಾಗೂ ತಾನ್ಪುರಾದಲ್ಲಿ ಸ್ನೇಹಾ ಸಂಪದಾರವರು ಸಹಕರಿಸಿದರು.
ಜನನಿ ಮ್ಯೂಸಿಕಸಂಸ್ಥೆಯ ದಿನೇಶ ಹೆಗಡೆ ಆರಂಭದಲ್ಲಿ ಸ್ವಾಗತಿಸಿದರೆ ಗಿರಿಧರ ಕಬ್ನಳ್ಳಿ ಸಮರ್ಥವಾಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.