ಯಲ್ಲಾಪುರ: ಸಧೃಢ ದೇಶಕ್ಕೆ ಸಬಲ ನಾಯಕತ್ವ ರೂಪುಗೊಳ್ಳಲು ಯುವ ಸಮುದಾಯ ವಿದ್ಯಾರ್ಥಿ ದಿಸೆಯಲ್ಲೇ ನಾಯಕತ್ವದ ಗುಣಗಳನ್ನು ರೂಪಿಸಿಕೊಳ್ಳುತ್ತ ಹೊಗಬೇಕು. ಹಾಗಾದಾಗ ಮಾತ್ರ ನಾಯಕತ್ವದ ಪರಿಪೂರ್ಣತೆ ಹೂರಣಗೊಳ್ಳಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಹೇಳಿದರು.
ಅವರು ತಾಲೂಕಿನ ತಾಟವಾಳದಲ್ಲಿ ಯಲ್ಲಾಪುರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ನಾಯಕತ್ವ ನಿರ್ಮಾಣದಲ್ಲಿ ಎನ್ ಎಸ್ ಎಸ್ ಪಾತ್ರದ ಕುರಿತು ಉಪನ್ಯಾಸ ನೀಡುತ್ತಿದ್ದರು.ರಾಷ್ಟ್ರನಾಯಕರ ಆದರ್ಶದ ನಡೆ ನಮಗೆ ಪ್ರೇರಣೆಯಾಗಬೇಕು. ಆತ್ಮವಿಶ್ವಾಸವನ್ನು ಬಲಗೊಳಿಸುವ ಮೂಲಕ ಸವಾಲುಗಳನ್ನು ಎದುರಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಎನ್ ಎಸ್ ಎಸ್ ಬದುಕಿನ ಶಿಕ್ಷಣವನ್ನು ನೀಡುತ್ತದೆ.ಅದನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳ ಬೇಕೆಂದರು.
ಪತ್ರಕರ್ತ ಶ್ರೀಧರ ಅಣಲಗಾರ ಮಾತನಾಡಿ,” ಹಿಜಾಬ್ ಕೇಸರಿ ಶಾಲಿನ ಸಂಘರ್ಷದಲ್ಲಿ ನಲುಗಿರುವ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಭಾವ್ಯಕ್ಯತೆ ಸಾರುವ ತಾಟವಾಳದಲ್ಲಿ ಶಿಬಿರ ಆಯೋಜಿಸಿದ್ದು ರಾಷ್ಟ್ರಪ್ರೇಮ ಭಾವನೆ ಬಲಗೊಳ್ಳುವಂತಾಗಲೆಂದರು”.
ಗ್ರಾ.ಪಂ ಸದಸ್ಯ ವಾಸುದೇವ ಮಾಪ್ಸೇಕರ್ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುವ ಗುಣ ಬೆಳಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸುಬ್ರಾಯ ಬಿದ್ರೆಮನೆ ಮಾತನಾಡಿ,”ಸೇವೆಗೆ ಸ್ವಾರ್ಥದ ಮುಖ ಅಂಟಿ ಕೊಂಡಿದ್ದು,ಸೇವೆಯ ಅರ್ಥ ಸವಕಳಿಯಾಗುತ್ತಿದೆ. ಯುದ್ದ ಅಶಾಂತಿಯಿಂದ ಬಾಂದವ್ಯದ ಎಳೆ ಶಿಥಿಲವಾಗುತ್ತಿರುವ ವೇಳೆ ಅದನ್ನು ಜೋಡಿಸುವ ಕೆಲಸ ಆಗಬೇಕೆಂದರು.”
ತಾಟವಾಳ ದರ್ಗಾದ ಮುಜಾವರ ಸೈಯ್ಯದ್ ಉಸ್ಮಾನ್ ಸೈಯ್ಯದ್ ಇಬ್ರಾಹಿಂ ಬುಕಾರಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಧನ್ಯಾ ನಾಯಕ ಸ್ವಾಗತಿಸಿದರು.ಕಾರ್ಯಕ್ರಮಾಧಿಕಾರಿ ರಾಮಕೃಷ್ಣ ಗೌಡ ಪ್ರಸ್ತಾಪಿಸಿದರು.ಪ್ರೀತಿ ನಾಯಕ ನಿರೂಪಿಸಿದರು.ವಿಷ್ಣು ಮಳಿಕ್ ವಂದಿಸಿದರು.