ಕಾರವಾರ: ಐತಿಹಾಸಿಕ ಸ್ವಾತಂತ್ರ್ಯ ಹೋರಾಟಗಾರ ಹೆಂಜಾ ನಾಯ್ಕರ ಹೆಸರನ್ನು ನಗರದ ಕೋಡಿಬಾಗ ರಸ್ತೆಗೆ ಹಾಗೂ ವೃತ್ತಕ್ಕೆ ನಾಮಕರಣ ಮಾಡಬೇಕು ಎಂದು ಅಖಿಲ ಕೋಮಾರಪಂತ ಸಂಘ ಸಹಿತ ಅದೇ ಸಮಾಜದ ಮತ್ತೊಂದು ಗುಂಪಿನ ಹೋರಾಟ ತುರ್ತು ನಿರರ್ಥಕವಾಗಿದೆ. 2013ರಂದು ನಗರಸಭೆಯವರು ಠರಾವು ಮಾಡಿ ಕಳುಹಿಸಿದ ನಿರ್ಣಯದ ಬದಲಿಗೆ ಅದೇ ಹಳೆಯ ಪ್ರಕ್ರಿಯೆಯಲ್ಲಿ ಪುನಃ ನಗರಸಭೆ ಹಾಗೂ ಇನ್ನಿತರ ಅನುಮೋದನೆಯ ಹೊಸದಾದ ಪ್ರಸ್ತಾವನೆ ಸಲ್ಲಿಕೆಯಾಗಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ಕಳೆದ ಕೆಲವು ದಿನದಿಂದ ಕೋಮಾರ ಪಂತ ಸಮಾಜದ ಒಂದು ತಂಡದಿಂದ ಕೋಡಿಬಾಗ ವೃತ್ತಕ್ಕೆ, ರಸ್ತೆಗೆ ಹೆಂಜಾ ನಾಯ್ಕರ ಹೆಸರು ಘೋಷಣೆಯಾಗಬೇಕೆಂದು ಮೆರವಣಿಗೆ ಮತ್ತು ಸರಣಿ ವಿಜಯೋತ್ಸವ ಆಚರಣೆಯಲ್ಲಿದ್ದರೆ, ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಹಾಗೂ ಶಾಸಕಿ ರೂಪಾಲಿ ನಾಯ್ಕ ಈ ಬೇಡಿಕೆಗೆ ಭರವಸೆ ನೀಡಿದ್ದಾರೆ. ಆದರೆ ನಮಗೆ ವಿಜಯೋತ್ಸವ, ಮೆರವಣಿಗೆ ಬೇಕಾಗಿಲ್ಲ, ಆಶ್ವಾಸನೆಗಿಂತ ಸಚಿವ, ಶಾಸಕರಿಂದ ಸರಕಾರದ ಮಟ್ಟದಲ್ಲಿ ಅಧಿಕೃತ ನಾಮಕರಣ ಘೋಷಣೆ ತ್ವರಿತವಾಗಿ ಆಗಲಿ ಎಂದು ಅಖಿಲ ಕೋಮಾರಪಂತ ಸಂಘದ ಒತ್ತಾಯವಾಗಿದೆ. ಆದರೆ ಈ ಬೇಡಿಕೆ ಮಂಡಿಸುವ ಯಾವುದೇ ನಾಯಕರು, ಸಂಘಟನೆಯವರು ಅಥವಾ ಶಾಸಕ, ಸಚಿವರು ನಗರಸಭೆಯಿಂದ, ನಗರಾಭಿವೃದ್ಧಿ ಇಲಾಖೆ ಮೂಲಕ ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಹೋದ ಪ್ರಸ್ತಾವನೆ ಕಡತ ಏನಾಯ್ತು? ಎಂದು ಈವರೆಗೂ ಯಾಕೆ ಪರಿಶೀಲಿಸಿಲ್ಲ. ಒಂದು ಠರಾವ್ ಜಾರಿಗೆ ಬರುವಾಗ ಅದರ ಅವಧಿ ಎಷ್ಟು ವರ್ಷ. ಈ ಕಡತ ನಗರಾಭಿವೃದ್ಧಿ ಇಲಾಖೆಯ ಯಾರ ಸುಪರ್ದಿಯಲ್ಲಿದೆ.
ಈಗ ಅವರ ಬಳಿ ಹೋಗಿ ಕೇಳಿದರೆ ಏನು ಉತ್ತರ ನೀಡಬಹುದು? ಗುರುವಾರ ಜಿಲ್ಲಾ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಗೆ 2013ರಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಹೋದ ವೀರಯೋಧ ಹೆಂಜಾ ನಾಯ್ಕರ ರಸ್ತೆ ನಾಮಕರಣ ಫೈಲ್ ಬಗ್ಗೆ ವಿಚಾರಿಸಿದರೆ, ಅವರು 9 ವರ್ಷದ ಫೈಲ್ ಬಗ್ಗೆ ನಕಾರಾತ್ಮಕ ಉತ್ತರ ನೀಡಿದ್ದಾರೆ. ನೀವು ಕಾರವಾರದಿಂದ ಈ ಕಡತ ಕಳುಹಿಸಿದಾಗ ಅದರ ಜಾರಿಗೆ ಪ್ರಯತ್ನಿಸಬೇಕಿತ್ತು. ಆದರೆ ಈವರೆಗೂ ಯಾರೂ ಅದರ ಕುರಿತಾಗಿ ಪ್ರಯತ್ನಿಸಿದಂತಿಲ್ಲ.
ಈ ಅವಧಿಯಲ್ಲಿ ನಾಮಕರಣ ವಿಭಾಗಕ್ಕೆ ಯಾರೋರೋ ಕೇಸ್ ವರ್ಕರ್ ಗಳು ಬಂದು ಹೋಗಿದ್ದಾರೆ. ಫೈಲ್ ಏನಾಗಿದೆ ಗೊತ್ತಿಲ್ಲ. ಆದರೆ ಕಾರವಾರದಲ್ಲಿರುವ ಕೋಡಿಬಾಗ ರಸ್ತೆ ಮತ್ತು ವೃತ್ತಕ್ಕೆ ಹೆಂಜಾ ನಾಯ್ಕ ಹೆಸರಿಡುವ ಪ್ರಸ್ತಾವನೆಗೆ ಪುನಃ ಹಳೆಯ ದಾಖಲೆಗಳ ಮಾದರಿಯಲ್ಲಿ ನೂತನ ಠರಾವಿನ ಸಹಿತ ವಿವಿಧ ಅನುಮತಿ ಶಿಫಾರಸುಗಳ ಪಟ್ಟಿ ತಯಾರಿಸಿ, ನಗರಾಭಿವೃದ್ಧಿ ಇಲಾಖೆಯಿಂದ ಕಳಹಿಸಬೇಕು. ನಂತರ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಸಚಿವರ ಶಿಫಾರಸಿನೊಂದಿಗೆ ಜಾರಿಗೆ ಬರಬೇಕಾಗುತ್ತದೆ ಎಂದಿದ್ದಾರೆ.