ಯಲ್ಲಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನೇರ ಉತ್ತರ, ಉತ್ತಮ ಕೈ ಬರಹ ಹಾಗೂ ಸಮಯ ಪಾಲನೆಗೆ ಮಹತ್ವ ಕೊಡಬೇಕು ಎಂದು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳಾದ ಷಣ್ಮುಖ ಹೆಗಡೆ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ಶುಕ್ರವಾರ ನಡೆದ “ಪ್ರೇರಣಾ ಶಿಬಿರ”ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಹೀಗಾಗಿ ಅಗತ್ಯ ಪೂರ್ವ ತಯಾರಿ ಶುರು ಮಾಡಬೇಕು. ಯಾವ ಪ್ರಶ್ನೆಯನ್ನು ಸಹ ಕೆಡಗಣಿಸಬಾರದು. ಈ ಸಲ ವಿವರವಾಗಿ ಉತ್ತರ ಬರೆಯಬೇಕಾಗಿದ್ದರಿಂದ ಸತತ ಅದ್ಯಯನ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಿದ್ಧಾಪುರದ ಎಂ.ಜಿ.ಎ ಪ್ರೌಢಶಾಲೆಯ ಬಿ.ಜಿ ಹೆಗಡೆ ಮಾತನಾಡಿ, ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾಗಿದೆ. ವಿದ್ಯೆ ಕಲಿಯಲು ಆಸಕ್ತಿ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಮಾತನಾಡಿ, ಬೇರೆ ಕಡೆಯವರು ನಮ್ಮ ಜಿಲ್ಲೆಗೆ ಶಿಕ್ಷಣ ಅರೆಸಿ ಬರಬೇಕಾದ ವಾತಾವರಣ ಸೃಷ್ಠಿಸುವ ಕನಸು ವಿಶ್ವದರ್ಶನ ಸಂಸ್ಥೆಯದ್ದಾಗಿದೆ. ಪ್ರತಿ ಮಗುವಿನ ಆಸಕ್ತಿಗೆ ಅನುಗುಣವಾಗಿ ಇಲ್ಲಿ ಶಿಕ್ಷಣ ಕೊಡಲಾಗುತ್ತಿದೆ ಎಂದರು.
ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಸೆಂಟ್ರಲ್ ಸ್ಕೂಲ್ ನ ಪ್ರಾಚಾರ್ಯರಾದ ಗಣೇಶ ಭಟ್ಟ, ಕೆ.ಎಸ್.ಓ
ಯು ಸಂಯೋಜಕರಾದ ಡಾ. ಡಿ.ಕೆ ಗಾಂವ್ಕರ್, ಪ್ರಮುಖರಾದ ವಸಂತ ಹೆಗಡೆ, ರವಿಕುಮಾರ ಇತರರು ಭಾಗವಹಿಸಿದ್ದರು. ಪ್ರಭಾತ ಭಟ್ಟ ಪ್ರಾರ್ಥಿಸಿದರು. ಮುಕ್ತಾ ಶಂಕರ್ ಸ್ವಾಗತಿಸಿದರು. ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ಶ್ಯಾಮಲಾ ಕೆರೆಗದ್ದೆ ವಂದಿಸಿದರು.