ಶಿರಸಿ:ಧಾರವಾಡ ಹಾಲು ಒಕ್ಕೂಟದ ವತಿಯಿಂದ ವಾದಿರಾಜ ಮಠ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಮಮತಾ ಸಿ ಜೈನ್ ಇವರ ಜಾನುವಾರು ಮರಣ ಹೊಂದಿದ ಕಾರಣ ಜಾನುವಾರು ವಿಮೆಯ ಅಡಿಯಲ್ಲಿ ರೂ.35,000/ ಗಳ ಮೊತ್ತದ ಚೆಕ್ನ್ನು ಹಾಗೂ ಬಾಳೇಗದ್ದೆ ಹಾಲು ಉತ್ಪಾದಕರ ಸಹಾರಿ ಸಂಘಧ ಕಲ್ಯಾಣ ಸಂಘದ ಸದಸ್ಯರಾದ ಸತ್ಯನಾರಾಯಣ ಗ ಹೆಗಡೆ ಇವರು ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ರೂ. 5000/- ಗಳ ಮೊತ್ತದ ಚೆಕ್ನ್ನು ಸದರಿ ಫಲಾನುಭವಿಗಳಗೆ ಧಾರವಾಡ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರು ವಿತರಿಸಿದರು.
ಜಿಲ್ಲೆಯಲ್ಲಿ ನಂದಿನಿ ಹಾಲಿನ ಬೇಡಿಕೆ ದಿನದಿಂದ ದಿನ ಗಣನೀಯವಾಗಿ ಹೆಚ್ಚಾಗುತ್ತಿದೆ, ಕಾರಣ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕ ರೈತರುಗಳು ಈ ವಿಷಯವನ್ನು ವಿಶೇಷವಾಗಿ ಪರಿಗಣಿಸಿ ಇನ್ನೂ ಅತೀ ಹೆಚ್ಚಿನ ಹಾಲು ಉತ್ಪಾದನೆಯ ದೃಷ್ಠಿಯಿಂದ ಮನೆಗೊಂದು ಹಸುವನ್ನು ಕಟ್ಟಿ ಹೈನುಗಾರಿಕೆಯಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಹಾಲಿನ ಶೇಖರಣೆ ಒಕ್ಕೂಟಕ್ಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು ಹಾಗೂ ಜಿಲ್ಲೆಯ ಎಲ್ಲ ಹಾಲು ಉತ್ಪಾದಕ ರೈತರು ತಪ್ಪದೇ ಕಲ್ಯಾಣ ಸಂಘದ ಸದಸ್ಯತ್ವ ಪಡೆದು ಕಲ್ಯಾಣ ಸಂಘದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕೆಂದು ಈ ಮೂಲಕ ವಿನಂತಿಸಿಕೊಂಡರು.
ಜಾನುವಾರು ವಿಮಾ ಸೌಲಭ್ಯವನ್ನು ಅತ್ಯಂತ ಕಡಿಮೆ ವಿಮಾ ಕಂತಿನ ದರದಲ್ಲಿ ಒಕ್ಕೂಟದ ಕಲ್ಯಾಣ ಸಂಘದ ಅನುದಾನದಿಂದ ನೀಡುತ್ತಿರುವದರಿಂದ ಜಿಲ್ಲೆಯ ಎಲ್ಲ ಹಾಲು ಉತ್ಪಾದಕರ ರೈತರು ತಪ್ಪದೇ ಜಾನುವಾರು ವಿಮೆಯನ್ನು ಮಾಡಿಸಬೇಕು ಹಾಗೂ ಒಕ್ಕೂಟದ ಸದ್ಯದ ನೇಮಕಾತಿಯಲ್ಲಿ ಪಶು ವೈದ್ಯರುಗಳ ನೇಮಕಾತಿ ಮಾಡಲಾಗಿದ್ದು ಜಿಲ್ಲೆಯ ನಿರ್ದೇಶಕರುಗಳ ಕಾರ್ಯವ್ಯಾಪ್ತಿಗೆ ಬರುವಂತೆ ತಲಾ ಒಬ್ಬರಂತೆ ಪಶು ವೈದ್ಯರನ್ನು ಕಾರ್ಯನಿಯುಕ್ತಿಗೊಳಿಸಲಾಗುವುದು, ಇದರಿಂದ ಜಿಲ್ಲೆಯ ಎಲ್ಲ ಹಾಲು ಉತ್ಪಾದಕರ ರೈತರಿಗೆ ಬಹಳ ಅನುಕೂಲವಾಗಲಿದ್ದು ಜಿಲ್ಲೆಯ ಹಾಲು ಉತ್ಪಾದಕರುಗಳು ಪಶುವೈದ್ಯರ ಸೇವೆಯನ್ನು ಸದುಪಯೋಗ ಪಡೆಯಬೇಕು ಎಂದು ಈ ಮೂಲಕ ಅವರು ಕರೆ ನೀಡಿದರು.
ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಧಾರವಾಡ ಹಾಲು ಒಕ್ಕೂಟ ಹಾಗೂ ಕಲ್ಯಾಣ ಸಂಘದ ನೇತ್ರತ್ವದಲ್ಲಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಅನುದಾನದಲ್ಲಿ ರಬ್ಬರ್ ಮ್ಯಾಟ್, ಹಾಲು ಕರೆಯುವ ಯಂತ್ರ , ಹುಲ್ಲು ಕತ್ತರಿಸುವ ಯಂತ್ರಗಳನ್ನು ನೀಡುವ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು, ಕೆ.ಡಿ.ಸಿ.ಸಿ ಬ್ಯಾಂಕ್ ಸಹಯೋಗದೊಂದಿಗೆ ಸಹ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಈಗಾಗಲೇ ಕೆ.ಸಿ.ಸಿ. ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದ್ದು, ಕೆ.ಡಿ.ಸಿ.ಸಿ ಬ್ಯಾಂಕ್ನಿಂದ ಜಿಲ್ಲೆಯ ಹಾಲು ಸಂಘಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗಾಗಿಯೂ ಸಹ ಸಹಾಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಾದಿರಾಜ ಮಠ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಮಧುಕರ ಹೆಗಡೆ, ಬಾಳೇಗದ್ದೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಂಜುನಾಥ ಹೆಗಡೆ, ಮುಖ್ಯ ಕಾರ್ಯನಿರ್ವಾಹಕರಾದ ಮಹಾಬಲೇಶ್ವರ ಹೆಗಡೆ, ಕಲ್ಯಾಣ ಸಂಘದ ಫಲಾನುಭವಿಯಾದ ಸತ್ಯನಾರಾಯಣ ಗ ಹೆಗಡೆ ಶಿರಸಿ ಉಪ ವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರಾದ ಅಭಿಷೇಕ ನಾಯ್ಕ ಉಪಸ್ಥಿತರಿದ್ದರು.