ಶಿರಸಿ: “ರಾಜ್ಯದ ಗೋಮಾಳ ಸೊಪ್ಪಿನ ಬೆಟ್ಟ, ಹುಲ್ಲು ಬನ್ನಿ ಮುಂತಾದ ಸಾವಿರಾರು ಎಕರೆ ಕಂದಾಯ ಭೂಮಿಗಳನ್ನು ಪರಭಾರೆ ಮಾಡಲು ಸರ್ಕಾರ ಅವಕಾಶ ನೀಡಬಾರದು. ಇದ್ದ ಸ್ಥಿತಿಯಲ್ಲೇ ಗ್ರಾಮ ಸಾಮೂಹಿಕ ನೈಸರ್ಗಿಕ ಸಂಪತ್ತನ್ನು ಸಂರಕ್ಷಣೆ ಮಾಡಬೇಕು” ಎಂದು ಗೋಮಾಳ ಬೆಟ್ಟ ಸಂರಕ್ಷಣಾ ಅಭಿಯಾನದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಸೌಧದ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಮಾ.9 ರಂದು ಮನವಿ ಸಲ್ಲಿಸಲಾಯಿತು.
ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಹಿರಿಯ ಸಹಕಾರಿ ಮುಖಂಡರಾದ ಹೆಚ್.ಎಸ್. ಮಂಜಪ್ಪ ಹೊಸಬಾಳೆ,ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿ ಕುಂಬ್ರಿ, ಜಿಲ್ಲಾ ಬೆಳೆಗಾರರ ಸಂಘದ ಸಂಚಾಲಕ ನಾರಾಯಣ ಗಡೀಕೈ, ಜೀವ ವೈವಿಧ್ಯ ಮಂಡಳಿ ಸದಸ್ಯ ಕವಲಕೋಡು ವೆಂಕಟೇಶ, ಅಡಿಕೆ ಕಾರ್ಯಪಡೆ ಸದಸ್ಯ ಗಣಪತಿ ಬೆಳ್ಳೇಕೇರಿ ಮುಂತಾದವರು ನಿಯೋಗದಲ್ಲಿದ್ದರು.
ಗೋಮಾಳ ಬೆಟ್ಟ ಇತ್ಯಾದಿ ಕಂದಾಯ ಭೂಮಿಗಳನ್ನು ಕೈಗಾರಿಕಾ ಸಂಸ್ಥೆಗಳಿಗೆ ಸರ್ಕಾರ ನೀಡುವ ಪ್ರಸ್ತಾಪ ಇಲ್ಲ ಎಂದು ಮುಖ್ಯಮಂತ್ರಿಗಳು ನಿಯೋಗಕ್ಕೆ ಸ್ಪಷ್ಟಪಡಿಸಿದರು.
ಗೃಹ ಸಚಿವರಾದ ಆರಗಜ್ಞಾನೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸರ್ಕಾರ ಗೋಮಾಳ ಭೂಮಿ ಕುರಿತು ನೀತಿ ನಿರೂಪಣೆ ಮಾಡಲು ಕ್ಯಾಬಿನೆಟ್ ಉಪಸಮಿತಿ ರಚಿಸಿದ್ದ ಹಿನ್ನೆಲೆಯಲ್ಲಿ ಮಲೆನಾಡಿನ ಸಂಘಟನೆಗಳ ನಿಯೋಗ ಮುಖ್ಯ ಮಂತ್ರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮಲೆನಾಡಿನ ಜಿಲ್ಲೆಗಳಲ್ಲಿ ಪಾರಂಪರಿಕವಾಗಿ ಗೋಮಾಳ, ಬೆಟ್ಟ, ಕುಮ್ಕಿ, ಹಾಡಿ ಜಾನುವಾರಿಗೆ ಮುಫತ್ತು ಮುಂತಾದ ಹೆಸರಿನಲ್ಲಿ ಲಕ್ಷಾಂತರ ಎಕರೆ ಗ್ರಾಮ ಅರಣ್ಯಗಳಿವೆ. ಇವು ಜಲಮೂಲಗಳು, ಹಳ್ಳಿಗಳ ಹಸಿರು ಪಟ್ಟಿ, ಜಾನುವಾರಿಗೆ ಮೇವಿನ ತಾಣ ಇದಾಗಿದೆ. ರೈತರ ಸಹಭಾಗಿತ್ವದಲ್ಲಿ ಕಂದಾಯ ಅರಣ್ಯ ಇಲಾಖೆ ಜಂಟಿಯಾಗಿ ಈ ಗ್ರಾಮ ಭೂಮಿಗಳ ನಿರ್ವಹಣೆ ರಕ್ಷಣೆಗೆ ಕಾರ್ಯಯೋಜನೆ ರೂಪಿಸಿಬೇಕು. ಎಂದು ಪರಿಸರ, ಬೆಳೆಗಾರರ ಸಂಘಟನೆಗಳು ಮನವಿ ಮಾಡಿವೆ.
ಮಾನ್ಯ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿದ ನಿಯೋಗ ಗ್ರಾಮ ಸಾಮಾಹಿಕ ಭೂಮಿ ರಕ್ಷಣೆಗೆ ಮನವಿ ಸಲ್ಲಿಸಿತು. “ಮಲೆನಾಡಿನ ಮಣ್ಣಿನ ಮಗನಾಗಿ ಬೆಟ್ಟ ಗೋಮಾಳ ಭೂಮಿ ಉಳಿವಿನ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ” ಎಂದು ಭರವಸೆ ನೀಡಿದರು.
ಗೋಮಾಳ ಕುರಿತ ಕ್ಯಾಬಿನೆಟ್ ಉಪ ಸಮಿತಿ ಸದಸ್ಯರೂ ಆಗಿರುವ ಅಡಿಕೆ ಕಾರ್ಯಪಡೆ ಅಧ್ಯಕ್ಷರಾದ ಸಚಿವ ಆರಗಜ್ಞಾನೇಂದ್ರ ಅವರನ್ನು ನಿಯೋಗ ಭೇಟಿ ಮಾಡಿ ವಿವರ ಸಮಾಲೋಚನೆ ನಡೆಸಿತು. ಈಗಾಗಲೇ ಸಾಗರ, ಶಿರಸಿ, ಯಲ್ಲಾಪುರ ಭಟ್ಕಳ ಹೊನ್ನಾವರ ಸೊರಬಗಳಲ್ಲಿ ಗೋಮಾಳ ಉಳಿಸಿ ಅಭಿಯಾನ ಸಭೆಗಳು ನಡೆದಿವೆ ಎಂಬ ಮಾಹಿತಿಯನ್ನು ನಿಯೋಗ ನೀಡಿತು.
ನಿಯೋಗ ಕಂದಾಯ ಸಚಿವ ಆರ್. ಅಶೋಕ, ಅರಣ್ಯ ಸಚಿವ ಉಮೇಶ ಕತ್ತಿ ಅವರಿಗೆ ಗೋಮಾಳ ಭೂಮಿ ಬೆಟ್ಟ ಅರಣ್ಯ ರಕ್ಷಣೆ ಬಗ್ಗೆ ಮನವಿ ಸಲ್ಲಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಅವರನ್ನು ನಿಯೋಗ ಭೇಟಿ ಮಾಡಿ ಸಮಾಲೋಚನೆ ನಡೆಸಿತು.