ಶಿರಸಿ:ಹಿಂದಿನ ಕಾಲದಂತೆ ಮಹಿಳೆ ಈಗಿಲ್ಲ. ಅವಳು ಸಾಕಷ್ಟು ಮುಂದುವರೆದಿದ್ದಾಳೆ. ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ಇರುವ ವಿಫುಲ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತನ್ನ ಅಸ್ತಿತ್ವದ ಘನತೆ ಗೌರವವನ್ನು ತನ್ನ ಸಾಧನೆಯ ಮೂಲಕವೇ ಪರಿಚಯಿಸುತ್ತಿದ್ದಾಳೆ. ಇಂಥ ಸಂದರ್ಭದಲ್ಲಿ ನಾವು ಜಾತಿ ಮತ ಧರ್ಮ ಪಂಥಗಳಾಚೆ ನಿಂತು ಮಾನವತೆಯ ತತ್ವದೊಂದಿಗೆ ಮನುಷ್ಯ ಮನುಷ್ಯರನ್ನು ಪ್ರೀತಿಸುತ್ತಾ ಸಾಗಿದಾಗ ವಿಶ್ವ ಮಹಿಳಾ ದಿನಾಚರಣೆ ಸಂದೇಶ ವಿಶ್ವಕ್ಕೆ ಸಾರಿದಂತಾಗುವುದು. ಇಂದಿನ ಕಾರ್ಯಕ್ರಮದ ಉದ್ದೇಶ ಹಾಗೂ ಶೀರ್ಷಿಕೆ ಎರಡು ಅತ್ಯಂತ ಅರ್ಥಪೂರ್ಣವಾದುದು” ಎಂದು ಸಾಹಿತಿ ಭಾಗೀರತಿ ಹೆಗಡೆ ಅಭಿಪ್ರಾಯ ಪಟ್ಟರು.
ಅವರು ಮಾರ್ಚ್ 8ರಂದು ಅರುಣೋದಯ ತರಬೇತಿ ಕೇಂದ್ರದಲ್ಲಿ ಕದಂಬ ಕಲಾ ವೇದಿಕೆ ಶಿರಸಿ ಹಾಗೂ ಶಿರಸಿ ಕರೋಕೆ ಸ್ಟುಡಿಯೋ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ “ಅಮ್ಮ ನಿನ್ನ ಎದೆಯಾಳದಲ್ಲಿ” ಶೀರ್ಷಿಕೆಯ ಸಂಗೀತ ಸಂಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯ ಕರ್ನಾಟಕದ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ ಮಾತನಾಡಿ “ಮಹಿಳೆ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಸಾಹಿತ್ಯಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಾಗೂ ಸಮಾಜಕ್ಕೆ ಮಹಿಳೆ ನೀಡಿದ ಕೊಡುಗೆಳನ್ನ ಸ್ಮರಿಸಿ ಸಂಭ್ರಮಿಸುವ ದಿನವೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಹೆಣ್ಣುಮಕ್ಕಳು ಇಂದು ಪುರುಷರಿಗೆ ಸಮಾನವಾಗಿ ಬದುಕನ್ನ ಕಟ್ಟಿಕೊಂಡು ಇಡೀ ಕುಟುಂಬವನ್ನ ಸಾಕುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ತಾಯಿಯಾಗಿ ತಂಗಿಯಾಗಿ ಪತ್ನಿಯಾಗಿ ಮಗಳಾಗಿ ನಮ್ಮ ಮನ ಮನೆಗಳನ್ನು ಬೆಳಗುವ ಮಹಿಳೆಯನ್ನ ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯಾಧಿಕಾರಿ ಕಿರಣ್ ಬಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶಾಲಾ ಆರ್ ಕೆ ಹಾಗೂ ಶುಭ ಟಿ ಉಪಸ್ಥಿತರಿದ್ದರು. ಸಮಸ್ತ ಮಹಿಳೆಯರ ಪರವಾಗಿ ಸಾಹಿತಿ ಕಥೆಗಾರ್ತಿ ಭಾಗೀರತಿ ಹೆಗಡೆಯವರನ್ನ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ಖುರ್ಚಿ ಹಾಗೂ ಸಂಗೀತ ರೆಟ್ರೋ ಸ್ಪರ್ಧೆಯಲ್ಲಿ ಮಹಿಳೆಯರು ಅತ್ಯಂತ ಆಸಕ್ತಿಯಿಂದ ಬಾಗವಹಿಸಿ ಹಾಡಿ ನಲಿದು ಕುಣಿದು ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ಶ್ರೀಮತಿ ಜ್ಯೋತಿ ಸತೀಶ್, ಉಷಾ ಕಿರಣ್ ಹಾಗೂ ಪದ್ಮಾ ಶೇಟ್ ವಿಜಯಿಯಾದರು ಕಾರ್ಯಕ್ರಮದ ಸಂಘಟಕ ನಿತ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರಸಿ ರತ್ನಾಕರ ಸ್ವಾಗತಿಸಿ ಕಾರ್ಯಕ್ರಮವನ್ನ ನಿರೂಪಿಸಿದರು. ಗೀತಾ ಸಂತೋಷ್ ಪ್ರಾರ್ಥಿಸಿದರು. ದಿವ್ಯಾ ಶೇಟ್ ಶೀರ್ಷಿಕೆ ಗೀತೆಯನ್ನ ಹಾಡಿದರು. ಅರುಣೋದಯ ಟ್ರಸ್ಟ್ ನ ಸತೀಶ್ ನಾಯ್ಕ ದಂಪತಿಗಳು ಸಹಕರಿಸಿದರು.