ನವದೆಹಲಿ: 1999 ರಲ್ಲಿ ಏರ್ ಇಂಡಿಯಾ ವಿಮಾನ IC-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್ ಜಾಹಿದ್ ಅಖುಂಡ್ ಪಾಕಿಸ್ಥಾನದ ಕರಾಚಿಯಲ್ಲಿ ಕೊಲೆಯಾಗಿದ್ದಾನೆ. ಮಾರ್ಚ್ 1 ರಂದು ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯಲ್ಲೇ ಆತನ ಮೇಲೆ ದಾಳಿ ನಡೆಸಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಜಹೂರ್ ಭಯೋತ್ಪಾದಕ ಸಂಘಟನೆ ಜೈಶ್-ಎ-ಮುಹಮ್ಮದ್ ಜೊತೆ ಸಂಬಂಧ ಹೊಂದಿದ್ದ . ಉದ್ಯಮಿಯಂತೆ ನಟಿಸಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಇಬ್ಬರು ದುಷ್ಕರ್ಮಿಗಳು ಬಂದು ದಾಳಿ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಸ್ಕ್ ಧರಿಸಿದ್ದರಿಂದ ಇವರ ಗುರುತು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐ ಕೂಡ ದಾಳಿಯಿಂದ ಶಾಕ್ಗೆ ಒಳಗಾಗಿದೆ ಎನ್ನಲಾಗಿದೆ.
1999 ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಣವನ್ನು ಭಯೋತ್ಪಾದಕರನ್ನು ಬಂಧಮುಕ್ತಗೊಳಿಸುವ ಸಂಚಿನ ಭಾಗವಾಗಿ ರೂಪಿಸಲಾಗಿತ್ತು. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಅಲ್ ಉಮರ್ ಮುಜಾಹಿದ್ದೀನ್, ಮುಷ್ತಾಕ್ ಅಹ್ಮದ್ ಜರ್ಗರ್ ಮತ್ತು ಬ್ರಿಟಿಷ್ ಮೂಲದ ಅಲ್-ಖೈದಾ ನಾಯಕ ಅಹ್ಮದ್ ಒಮರ್ ಸಯೀದ್ ಅನ್ನು ಭಾರತೀಯ ಜೈಲುಗಳಿಂದ ಬಿಡುಗಡೆ ಮಾಡುವುದು ಇದರ ಉದ್ದೇಶವಾಗಿತ್ತು.
ಐಸಿ-814 ವಿಮಾನದ 176 ಪ್ರಯಾಣಿಕರನ್ನು ಅಪಹರಣಕಾರರು ಏಳು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿದ್ದರು. ವಿಮಾನವು ಕಠ್ಮಂಡುವಿನಿಂದ ಹೊರಟು ದೆಹಲಿಗೆ ಹೋಗುತ್ತಿತ್ತು ಆದರೆ ಅದನ್ನು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್ಗೆ ಕೊಂಡೊಯ್ಯಲಾಯಿತು.
ಪಾಕಿಸ್ಥಾನದ ಮಿಲಿಟರಿ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲದಿಂದ ಈ ಅಪಹರಣ ನಡೆದಿತ್ತು ಎಂದು ಹೇಳಲಾಗಿದೆ.