ಹುಬ್ಬಳ್ಳಿ: ಸ್ತ್ರೀಯರ ಸಬಲೀಕರಣ ಮತ್ತು ಶಿಕ್ಷಣಕ್ಕಾಗಿ ಇಡೀ ಜೀವನ ಮುಡಿಪಿಟ್ಟ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಸ್ಮರಣಾರ್ಥ ರಾಜ್ಯ ಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ನೀಡಲು ಪ್ರಸ್ತುತ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದು, ಸ್ವಾಗತಾರ್ಹ ಎಂದು ಕರ್ನಾಟಕ ವಿದಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ತ್ರೀಯರ ಬಾಳು ಬೆಳಗಿದ ಅಕ್ಷರವ್ವ ಎಂದೇ ಖ್ಯಾತಿ ಹೊಂದಿದ ಬಾಲಕಿಯರ ಶಿಕ್ಷಣಕ್ಕೆ ದೇಶದಲ್ಲಿಯೇ ಮೊದಲ ಶಾಲೆ ಸ್ಥಾಪಿಸಿದ ಧೀಮಂತೆ, ಸಾಧಕಿ ಸಾವಿತ್ರಿಬಾಯಿ ಪುಲೆ ಅವರ ಹೆಸರಿನಲ್ಲಿ ಪ್ರತಿವರ್ಷ ಸಾಧನೆ ಮಾಡಿದ ಆದರ್ಶ ಶಿಕ್ಷಕ ಶಿಕ್ಷಕಿಯರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶಿಕ್ಷಕ ಸಮೂಹದ ಗೌರವ ಹೆಚ್ಚಿಸಿದಂತಾಗಿದೆ. ಪ್ರತಿಭಾವಂತರನ್ನು ಸರಕಾರ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಶಿಕ್ಷಕರಲ್ಲಿ ಮತ್ತಷ್ಟುಆತ್ಮ ವಿಶ್ವಾಸಗೌರವವನ್ನು ಇಮ್ಮಡಿಗೊಳಿಸಿದಂತಾಗುತ್ತದೆ. ಇಂತಹ ಉತ್ತಮ ಕ್ರಮಗಳು ಶಿಕ್ಷಣ ಇಲಾಖೆಯಲ್ಲಿ ಹೆಚ್ಚೆಚ್ಚು ಆಗಬೇಕಾಗಿದೆ ಎಂದು ಹೇಳಿದರು.
ಸಾವಿತ್ರಿಬಾಯಿ ಪುಲೆ ಅವರನ್ನು ಸ್ಮರಿಸುವ ಕಾರ್ಯಕ್ರಮವನ್ನು ಅವ್ವ ಸೇವಾ ಟ್ರಸ್ಟ ಆಶ್ರಯದಲ್ಲಿ ೨೦೧೫ರಲ್ಲಿ ಬೆಳಗಾವಿ ವಿಭಾಗ ಮಟ್ಟದ ಶಿಕ್ಷಕಿಯರ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ೧೨ ಸಾವಿರಕ್ಕೂ ಹೆಚ್ಚು ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಪುಲೆ ಅವರ ಜೀವನದ ಕುರಿತು ಹೊರಡಿಸಿದ ಪುಸ್ತಕವನ್ನು ನೀಡಲಾಯಿತು.
ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನವಾದ ಜನೇವರಿ-೦೩ನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಲು ಅಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರನ್ನು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರತಿ ವರ್ಷ ಜನೇವರಿ-೦೩ನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ನೆನಪಿಸಿಕೊಂಡಿದ್ದಾರೆ.
ಪ್ರಸ್ತುತ ಈ ಬಾರಿ ಮುಂಗಡ ಪತ್ರದಲ್ಲಿ ಹಲವಾರು ಶೈಕ್ಷಣಿಕ ಅಭಿವೃದ್ಧಿಗೆ ಕ್ರಮಕೈಗೊಂಡಿರುವುದು ಕೂಡಾ ಸ್ವಾಗತಾರ್ಹ ಅಲ್ಲದೇ ಆದರ್ಶ ಶಿಕ್ಷಕ ಶಿಕ್ಷಕಿಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು ಸಹ ಅತ್ಯಂತ ಅಭಿನಾಂದನಾರ್ಹ ಎಂದು ತಿಳಿಸಿದ್ದಾರೆ.