ಸಿದ್ದಾಪುರ: ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲೂ ಕಲೆ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿ ಇರುತ್ತದೆ. ಇದು ನಮ್ಮ ಬದುಕಿಗೆ ಬೆಳಕನ್ನೂ ಸೌಂದರ್ಯವನ್ನು ಹಾಗೂ ಸಂಸ್ಕಾರವನ್ನು ಕಲ್ಪಿಸುತ್ತದೆ. ಕಲೆಯ ಜೊತೆಗಿನ ಜೀವನಯಾನ ಸಂತೃಪ್ತಿಯನ್ನು ನೀಡುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲಾಚಾರ್ ಹೇಳಿದರು.
ತಾಲೂಕಿನ ಹೊನ್ನೆಘಟಗಿ ನಾಗಚೌಡೇಶ್ವರಿ ದೇವಾಲಯದ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡ ಯಕ್ಷಗಾನ ಪ್ರದರ್ಶನದ ಮಧ್ಯೆ ದೇವಾಲಯ ಸಮಿತಿಯವರು ನೀಡಿದ ಸಂಮಾನಕ್ಕೆ ಉತ್ತರಿಸುತ್ತ ದೇಶವಿದೇಶಗಳಲ್ಲಿ ಸಂಚರಿಸಿ ಪ್ರದರ್ಶನಗಳನ್ನು ನೀಡಿ ಬದುಕಿಗೊಂದು ಆಸರೆಯಾಗಿ ನಿಂತಿರುವುದು ನಮ್ಮ ಯಕ್ಷಗಾನ. ನನ್ನ ಬದುಕಿನ ಉಸಿರೇ ಆಗಿದೆ. ನಿಮ್ಮೆಲ್ಲರ ಪ್ರೀತಿಯನ್ನು ಜನ್ಮ ಜನ್ಮಾಂತರಕ್ಕಾಗುವಷ್ಟು ಕಂಡುಂಡವನು. ನಮ್ಮೆಲ್ಲರ ಅಭಿಮಾನ ನನ್ನನ್ನು ಇಷ್ಟು ಎತ್ತರಕ್ಕೆ ಏರಿಸಿದೆ. ಅದಕ್ಕಾಗಿ ನಾನು ಸದಾ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದರು.
ಕಲಾಭಾಸ್ಕರ (ರಿ.) ಇಟಗಿಯವರು ಹೆಮ್ಮನಬೈಲು ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯ ಸಹಯೋಗದೊಂದಿಗೆ ಮಾಲೇಕೊಡಲು ಶಂಭು ಭಟ್ಟ ವಿರಚಿತ “ಚಂದ್ರಹಾಸ ಚರಿತ್ರೆ” ಹಾಗೂ ಗುಂಡೂ ಸೀತಾರಮಯ್ಯ ವಿರಚಿಸಿದ “ಕಂಸ ದಿಗ್ವಿಜಯ- ಕಂಸವಧೆ” ಎಂಬ ಪೌರಾಣಿಕ ಆಖ್ಯಾನಗಳ ಯಕ್ಷಗಾನ ಪ್ರದರ್ಶನ ನಡೆಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಹೆರಂಜಾಲು ಗೋಪಾಲ ಗಾಣಿಗ, ಸೃಜನ ಹೆಗಡೆ ಗುಬ್ಬಿಗ, ಭಾರ್ಗವ ಮುಂಡಿಗೆಸರ ಭಾಗವಹಿಸಿದರು. ಮದ್ದಳೆವಾದಕರಾಗಿ ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ರಾವ್ ಗುಡ್ಡೆದಿಂಬ ಸಹಕರಿಸಿದರು. ಚಂಡೆವಾದನವನ್ನು ಪ್ರಸನ್ನ ಭಟ್ಟ ಹೆಗ್ಗಾರ್ ನಡೆಸಿದರು. ಪಾತ್ರವರ್ಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲಾಚಾರ್ ಚಂದ್ರಹಾಸನಾಗಿ ಸುಂದರವಾಗಿ ಅಭಿನಯಿಸಿದರು. ದುಷ್ಟಬುದ್ದಿಯಾಗಿ ಬೆಳೆಯೂರು ಸಂಜಯನವರು ವಿಜೃಂಬಿಸಿದರು. ಹಾಸ್ಯ ಪಾತ್ರಗಳಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ ನಗೆಗಡಲಲ್ಲಿ ತೇಲಿಸಿದರು. ವಿಷಯೆಯಾಗಿ ಇಟಗಿ ಮಹಾಬಲೇಶ್ವರ ಲಾಲಿತ್ಯದಿಂದ ನಟಿಸಿದರು. ಮದನನಾಗಿ ಅಶೋಕ ಭಟ್ಟ ಅತ್ಯದ್ಭುತವಾಗಿ ರಂಗವಾಳಿದರು.