ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಆದಿತ್ಯ ಗುಡಿಗಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಂಬೇಡ್ಕರ್ ನಗರದ ಪ.ಪಂ ಕಚೇರಿ ಮುಂಭಾಗದಲ್ಲಿ, ಅಂಬೇಡ್ಕರ್ ಕಲ್ಯಾಣ ಮಂಟಪದ ಹತ್ತಿರ ಹಾಗೂ ಬಿಸಿಎಂ ಹಾಸ್ಟೆಲ್ ಮುಂಭಾಗದಲ್ಲಿರುವ ನೀರಿನ ಟ್ಯಾಂಕ್ ಗಳನ್ನು ತೆರವುಗೊಳಿಸುವ ಕುರಿತು ಬಂದ ಅರ್ಜಿಯ ಬಗೆಗೆ ಪ್ರಸ್ತಾಪವಾದಾಗ ಸದಸ್ಯ ರಾಧಾಕೃಷ್ಣ ನಾಯ್ಕ ಹಾಗೂ ಇತರ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ನೀರಿನ ಸಮಸ್ಯೆ ಉಂಟಾದಾಗ ಇಂತಹ ಟ್ಯಾಂಕ್ ಗಳ ಮಹತ್ವ ತಿಳಿಯುತ್ತದೆ. ಟ್ಯಾಂಕ್ ತೆರವುಗೊಳಿಸುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದೇವಿ ದೇವಸ್ಥಾನದಿಂದ ಕಾಳಮ್ಮನಗರಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೊಳಿಸುವಂತೆ ಸದಸ್ಯ ಕೈಸರ್ ಸೈಯ್ಯದ್ ಅಲಿ ಆಗ್ರಹಿಸಿದರು.
ಮೀನು ಮಾರುಕಟ್ಟೆಯ ಖಾಲಿ ಇರುವ ಕಟ್ಟೆಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಇನ್ನೂ ಹಲವು ಕಟ್ಟೆಗಳು ಖಾಲಿ ಇವೆ. ಖಾಲಿ ಇರುವ ಕಟ್ಟೆಗಳಿಗೆ ಟೆಂಡರ್ ಕರೆದು ಒಂದು ವಾರದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಣಯಿಸಲಾಯಿತು.
ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಅಮಿತ್ ಅಂಗಡಿ, ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.