ಶಿರಸಿ : ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾದ ಮೊಡರ್ನ ಎಜ್ಯುಕೇಶನ್ ಸೊಸೈಟಿಯ ವಾಣಿಜ್ಯ ಮಹಾವಿದ್ಯಾಲಯದ ಈ ವರೆಗೆ ಪ್ರಾಚಾರ್ಯರಾಗಿರುವ ಡಾ. ಟಿ.ಎಸ್.ಹಳೆಮನೆ ಅವರು ಈಗ ಎಮ್.ಎಮ್. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.
ಪದಗ್ರಹಣ ಸಂದರ್ಭದಲ್ಲಿ ಎಂ.ಇ.ಎಸ್ ನ ಜಂಟಿ ಕಾರ್ಯದರ್ಶಿ ಡಾ ಜಿ ಎಸ್ ಭಟ್ ಉಪ್ಪೋಣಿ, ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಸ್.ಹೆಗಡೆ, ಲೋಕೇಶ ಹೆಗಡೆ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು, ಶಿಕ್ಷಣ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.
ಸುಮಾರು ಮೂರು ದಶಕಗಳಿಗಿಂತ ಹೆಚ್ಚು ಕಾಲ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಹಳೆಮನೆ ಅವರು ಯಲ್ಲಾಪುರ ತಾಲೂಕಿನ ಬಳಗಾರ ಗ್ರಾಮದವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು ಯಲ್ಲಾಪುರದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪಡೆದರು. ಅಂಕೋಲಾದ ಗೋಖಲೆ ಸೆಂಟಿನರಿ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು, ಪಿ.ಜಿ ಡಿಪ್ಲೊಮಾ ಇನ್ ಎಪಿಗ್ರಾಫಿ ಮತ್ತು ಡಿಪ್ಲೊಮಾ ಇನ್ ಹ್ಯುಮನ್ ರೈಟ್ಸ್ ಪದವಿಗಳನ್ನು ಪಡೆದರು.
ನಂತರದಲ್ಲಿ ಸೇವೆಗೆ ಸೇರಿದ ಇವರು ‘ರಾಮಚಂದ್ರಾಪುರ ಮಠ ಇಟ್ಸ್ ಹಿಸ್ಟರಿ ಅಂಡ್ ಎಂಟಿಕ್ವಿಟಿಸ್’ ಎಂಬ ಮಹಾಪ್ರಬಂಧ ಮಂಡಿಸಿ ಕವಿವಿ ಧಾರವಾಡದಿಂದ ಡಾಕ್ಟರೇಟ್ ಪದವಿ ಪಡೆದರು. ಉತ್ತರಕನ್ನಡ ಜಿಲ್ಲಾ ಪರಂಪರಾ ಕೂಟದ ಸಂಚಾಲಕರೂ ಹಾಗೂ ಪ್ರಾಚ್ಯವಸ್ತು ಸಂಗ್ರಾಹಕರೂ ಆಗಿರುವ ಡಾ. ಹಳೆಮನೆ ರಾಜ್ಯ ಮಟ್ಟದ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಿ, ಸಂಪನ್ಮೂಲ ವ್ಯಕ್ತಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಯುವ ಸೇನಾದಳದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.