ಶಿರಸಿ: ಕರ್ನಾಟಕದಲ್ಲಿ ಈಗಾಗಲೇ 35 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ, ಇದರಲ್ಲಿ ಅನೇಕ ಹತ್ಯೆಗಳು ನಡುರಸ್ತೆಯಲ್ಲಿ ಹಾಗೂ ಹಾಡುಹಗಲೇ ನಡೆದಿವೆ. ಇದೊಂದು ಭಯೋತ್ಪಾದಕ ಕೃತ್ಯವೇ ಆಗಿದೆ. ಜನಸಾಮಾನ್ಯರು ಹಾಗೂ ನಾಯಕರು ಅವರ ಧರ್ಮದ ಕುರಿತು ಧ್ವನಿ ಎತ್ತದಂತೆ ಮಾಡಿ ಅವರ ಧ್ವನಿಯನ್ನು ಅಡಗಿಸುವುದೇ ಈ ಹತ್ಯೆಗಳ ಹಿಂದಿರುವವರ ಉದ್ದೇಶವಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ನಾವು ಪೊಲೀಸರ ವೈಫಲ್ಯವನ್ನು ಕಾಣಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಜಿ. ಎಂ. ನಟರಾಜ ಇವರು ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು.
ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ : ತೆರೆಮರೆಯ ಕೈವಾಡ ಯಾರದ್ದು ?’ ಈ ವಿಶೇಷ ಆನ್ಲೈನ್ ಚರ್ಚೆಯಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಎಸ್ಡಿಪಿಐ ಹಾಗೂ ಪಿಎಫ್ಐ ನಂತಹ ಸಂಘಟನೆಗಳನ್ನು ನಿಷೇಧಿಸುವ ಮಾತು ಒಂದೆಡೆಯಾದರೆ, ಇನ್ನೊಂದೆಡೆ ಈ ಸಂಘಟನೆಗಳು ಮತ್ತೊಂದು ಹೆಸರಿನಲ್ಲಿ ತಮ್ಮ ಕಾರ್ಯವನ್ನು ಶುರುಮಾಡುವವು, ಆದ್ದರಿಂದ ಇದರ ಜೊತೆಯಲ್ಲಿ ಇಂತಹ ಮಾನಸಿಕತೆಯಿರುವ ವ್ಯಕ್ತಿಗಳ ಬಗ್ಗೆ ವಿಚಾರ ಮಾಡುವುದು ಅವಶ್ಯಕವಾಗಿದೆ, ಅವರಿಗೆ ಯಾರು ಬೆಂಬಲಿಸುತ್ತಿದ್ದಾರೆ, ದೇಶದ ಒಳಗೆ ಮತ್ತು ಹೊರಗೆ ಅವರಿಗೆ ಯಾರು ಭಯೋತ್ಪಾದಕ ಕೃತ್ಯಗಳಿಗಾಗಿ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ನೋಡಬೇಕಿದೆ. ಇದರ ಬಗ್ಗೆ ಆಳವಾದ ತನಿಖೆ ಆದಾಗಲೇ ಪರಿಹಾರ ಸಿಗಬಹುದೇ ಹೊರತು ಮೇಲುಮೇಲಿನ ತನಿಖೆಯಿಂದಲ್ಲ ಎಂದು ಪ್ರತಿಕ್ರಿಯಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ, ಇಂದು ಜಿಹಾದಿಗಳು ರಾಜಾರೋಷವಾಗಿ ಹಿಂದೂ ಧರ್ಮದ ಮೇಲೆ ಮತ್ತು ಕಾರ್ಯಕರ್ತರ ಮೇಲೆ ಆಘಾತಗಳನ್ನೆಸಗುತ್ತಿದ್ದಾರೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ ಅಥವಾ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದಿಂದ ನ್ಯಾಯಾಂಗದ ನಿಂದನೆ ಮಾಡಿ ಈ ದೇಶವನ್ನು ಇಸ್ಲಾಮೀಕರಣಗೊಳಿಸುವ ಇವರ ದುರುದ್ದೇಶವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಕ್ಕೆ ಒಂದೇ ಉತ್ತರವೆಂದರೆ ಹಿಂದೂಜಾಗೃತಿ. ಕೇವಲ ಹಿಂದೂಜಾಗೃತಿ ಅಷ್ಟೇ ಅಲ್ಲ ಇದರೊಂದಿಗೆ ಹಿಂದೂ ಸಮಾಜವು ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯನ್ನು ಪ್ರಾರಂಭಿಸಬೇಕಿದೆ. ಅದರಿಂದ ಉತ್ಪನ್ನವಾಗುವ ಧರ್ಮಾಭಿಮಾನದಿಂದ ಸಂಘಟನೆಯನ್ನು ಮಾಡಿದರೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಮೂಲತತ್ತ್ವವನ್ನು ಆಧಾರಿಸಿದ ಭಾರತವು ‘ಹಿಂದೂ ರಾಷ್ಟ್ರ’ವಾಗಬೇಕಿದೆ ಎಂದರು.