ಸಿದ್ದಾಪುರ: ತಾಲೂಕಿನ ಶ್ರೀ ಸಂಸ್ಥಾನ ತರಳಿಮಠದಲ್ಲಿ ಮಹಾಶಿವರಾತ್ರಿಯಂದು 34ನೇ ವರ್ಷದ 1008 ಸತ್ಯನಾರಾಯಣ ವ್ರತ, ಕಳಸ ಪೂಜೆ,ನೂತನ ದೇವಸ್ಥಾನ ಕಟ್ಟಡದ ಭೂಮಿ ಪೂಜೆ, ಧರ್ಮ ಸಭೆ ಹಾಗೂ ತರಳೀ ಶ್ರೀ ಪ್ರಶಸ್ತಿ-2022 ಪ್ರದಾನ ಸಮಾರಂಭ ಮಾ.1ರಂದು ಜರುಗಲಿದೆ ಎಂದು ತರಳಿ ಸಂಸ್ಥಾನ ಮಠದ ಅಧ್ಯಕ್ಷ ಹಾಗೂ ನ್ಯಾಯವಾದಿ ಎನ್.ಡಿ.ನಾಯ್ಕ ಹೇಳಿದರು.
ಪಟ್ಟಣದ ನೌಕರರ ಭವನದ ಕಾರ್ಯಾಲಯದಲ್ಲಿ ಶಿವರಾತ್ರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿವರಾತ್ರಿಯಂದು ಬೆಳಗ್ಗೆ 8 ರಿಂದ 1008 ಸತ್ಯನಾರಾಯಣ ವ್ರತ ಕಳಸ ಪೂಜೆ, ಮಧ್ಯಾಹ್ನ 12ಕ್ಕೆ ಹೊಸನಗರ ತಾಲೂಕಿನ ಸಾರಗನಜೆಡ್ಡು ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಫೀಠಾದಿಪತಿ ಶ್ರೀ ಯೋಗೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಎಸ್.ರಾಮಪ್ಪ ಅವರ ಉಪಸ್ಥಿತಿಯಲ್ಲಿ ನೂತನ ದೇವಸ್ಥಾನ ಕಟ್ಟಡದ ಭೂಮಿ ಪೂಜೆ ನಡೆಯಲಿದೆ.
ಹೊಸನಗರ ತಾಲೂಕಿನ ಸಾರಗನಜೆಡ್ಡು ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಫೀಠಾದಿಪತಿ ಶ್ರೀ ಯೋಗೇಂದ್ರ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮ ಸಭೆ ನಡೆಯಲಿದ್ದು ಪ್ರತಿ ವರ್ಷದಂತೆ ನೀಡುವ ತರಳೀಶ್ರೀ ಪ್ರಶಸ್ತಿಯನ್ನು ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಎಸ್.ರಾಮಪ್ಪ ಅವರಿಗೆ ನೀಡಿ ಗೌರವಿಸಲಾಗುತ್ತದೆ.
ಶಿರಸಿ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಆರ್.ಜಿ.ನಾಯ್ಕ, ಶಿರಸಿ ತಾಲೂಕಿನ ಕ್ಯಾದಗಿಕೊಪ್ಪ ಗುರುಮಠದ ಧರ್ಮದರ್ಶಿ ಸಿ.ಎಫ್.ನಾಯ್ಕ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ ಅವರು ಉಪಸ್ಥಿತರಿರುತ್ತಾರೆ.ರಾತ್ರಿ 8ರಿಂದ ಅಹೋರಾತ್ರಿ ಸವಣೂರಿನ ಮರಿಯಮ್ಮ ದೇವಿ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ವ್ರತ ಕಮಿಟಿ ಅಧ್ಯಕ್ಷ ಎಸ್.ಎಚ್.ನಾಯ್ಕ, ಸದಸ್ಯರಾದ ಎಂ.ಐ. ನಾಯ್ಕ, ನಾರಾಯಣ ನಾಯ್ಕ, ದಿನೇಶ ನಾಯ್ಕ, ಶಂಕರ ನಾಯ್ಕ ಇದ್ದರು.