ಕಾರವಾರ: ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹಲವು ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬುಧವಾರ ನಗರದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿ, ಪಿಎಫ್ಐ ಮತ್ತು ಎಸ್ಡಿಪಿಐ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಬಿ.ಎಸ್.ಪೈ ಮಾತನಾಡಿ, ಶಿವಮೊಗ್ಗದ ಹಿಂದೂ ಯುವಕನ ಹತ್ಯೆ ತೀವ್ರ ಖಂಡನೀಯ. ಪಿಎಫ್ಐ ಮತ್ತು ಎಸ್ಡಿಪಿಐ ಭಯೋತ್ಪಾದನೆಗೋಸ್ಕರವೇ ಸೃಷ್ಟಿಯಾದ ಸಂಘಟನೆಗಳಾಗಿವೆ. ಹಿಜಾಬ್ ವಿಷಯದ ಹಿಂದೆಯೂ ಇವರ ಕೈವಾಡವಿದೆ. ಅಲ್ಲದೇ, ರಾಜ್ಯದಲ್ಲಿ ನಡೆದ ನೂರಾರು ಕೃತ್ಯಗಳಲ್ಲಿ ಇವರ ಅಭಯವಿದೆ. ರಾಜ್ಯ ಸರಕಾರ ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸಬೇಕು. ಅಲ್ಲದೇ, ಮೃತನ ಕುಟುಂಬಕ್ಕೆ ಶೀಘ್ರದಲ್ಲೇ 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆ ಶೀಘ್ರದಲ್ಲೇ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬಂಧಿಸಿ, ಇದರ ಹಿಂದೆ ಇರುವ ಎಲ್ಲರಿಗೂ ಕಠಿಣ ಶಿಕ್ಷೆ ನೀಡಬೇಕು. ಅಲ್ಲದೇ, ಹಿಂದೂ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ ಇಂಥ ಕೃತ್ಯ ನಡೆಸುವವರಿಗೆ ಕಠೀಣ ಕಾಗೃಹ ಶಿಕ್ಷೆ ವಿಧಿಸಬೇಕು. ಪೊಲೀಸ್ ಇಲಾಖೆಯೂ ಸಹ ಘಟನೆ ಜರುಗಿದ ಬಳಿಕ ಎಚ್ಚೆತ್ತುಕೊಳ್ಳುವುದರ ಬದಲು ಮುಂಚಿತವಾಗಿಯೇ ಇಂಥ ಕೃತ್ಯ ನಡೆಸದಂತೆ ಸೂಕ್ತ ಕ್ರಮವಹಿಸಬೇಕು ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ನಾವು ಹಿಂದೂಗಳ ಸಾವು ಸಂಭವಿಸಿದಾಗ ಮಾತ್ರ ಸಂಘಟಿತರಾಗದೇ ಸದಾ ಭಾರತದ ಏಳಿಗೆ ಜೊತೆಗೆ ಅಖಂಡ ಹಿಂದೂ ರಾಷ್ಟ್ರ ನಿರ್ಮಾಣವಾಗುವವರೆಗೂ ಪ್ರತಿಭಟನೆಯಲ್ಲಿ ಸಕ್ರೀಯರಾಗಿರಬೇಕು. ಮತೀಯ ಶಕ್ತಿಗಳನ್ನು ನಾಶಮಾಡಿ ದೇಶದಲ್ಲಿ ರಾಮ ರಾಜ್ಯ ಸೃಷ್ಟಿಸಬೇಕು. ನಮ್ಮ ದೇಶದಲ್ಲಿ ಔರಂಗಜೇಬ್ನ ಆಡಳಿತ ತರಲು ಹಿಂದೂಗಳು ಬಿಡಬಾರದು ಹಿಂದೂ ಕಾರ್ಯಕರ್ತರನ್ನು ಎಚ್ಚರಿಸಿದರು.
ದೇಶದಲ್ಲಿ ಮತೀಯ ಶಕ್ತಿಗಳ ಸೊಂಟ ಮುರಿಯುವ ಮೂಲಕ ಅವರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾಗಿದೆ. ಭಾರತ ಶಾಂತಿಯುತ ದೇಶವಾಗಬೇಕು. ಪ್ರತಿಯೊಬ್ಬನಿಗೂ ಸ್ವಾತಂತ್ರ್ಯ ಅನುಭವಿಸುವ ಹಕ್ಕಿದ್ದು, ದೇಶದ ವಿಷಯ ಬಂದಾಗ ಅದನ್ನೂ ಬಲಿಕೊಡಲು ಸಿದ್ಧರಿರಬೇಕು. ರಾಷ್ಟದ ನೀತಿ ನಿಯಮವನ್ನು ಎಲ್ಲರೂ ಪಾಲಿಸುವುದರ ಜೊತೆಗೆ ಭಾರತ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದರು.
ನಗರದ ಮಾರುತಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯು ನಗರದಾದ್ಯಂತ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಿತು. ನಂತರ ಕಾರ್ಯಕರ್ತರು ಸಭೆ ನಡೆಸಿ, ಪಿಎಫ್ಐ ಮತ್ತು ಎಸ್ಡಿಪಿಐ ನಿಷೇಧಿಸುವಂತೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರತನ್ ದುರ್ಗೇಕರ್, ಬಿಜೆಪಿ ಪ್ರಮುಖರಾದ ಮನೋಜ ಭಟ್, ಬಿಜೆಪಿ ಗ್ರಾಮೀಣ ಘಟಕಾಧ್ಯಕ್ಷ ಸುಭಾಷ ಗುನಗಿ, ರಾಜೇಂದ್ರ ನಾಯ್ಕ, ಜನಪರ ವೇದಿಕೆಯ ದಿಲೀಪ ಅರ್ಗೇಕರ್, ಮುರುಳಿಧರ ಗೋವೇಕರ, ದಿಲೀಪ ನಾಯ್ಕ ಶಿರವಾಡ, ಕಿಶನ ಕಾಂಬ್ಳೆ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.