ಹೊನ್ನಾವರ: ದೇಶದ ಪವಿತ್ರ ಸ್ಥಳ ಕೆಂಪು ಕೋಟೆಯ ಮೇಲೆ ಭಗವಾಧ್ವಜ ಹಾರಿಸುತ್ತೇವೆಂದು ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಸಚಿವ ಈಶ್ವರಪ್ಪರವನ್ನು ತಕ್ಷಣ ಸಂಪುಟದಿಂದ ವಜಾಗೊಳಿಸುವಂತೆ ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಮೂಲಕ ಆಗ್ರಹಿಸಿದ್ದಾರೆ.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ನೇತ್ರತ್ವದಲ್ಲಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಬಿಜೆಪಿ ಪಕ್ಷಕ್ಕೆ ಯಾವುದೇ ಭದ್ದತೆ ಇಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಭಾವನೆಗಳನ್ನು ಕೆರಳಿಸುವ ಕೆಲಸಕ್ಕೆ ಮುಂದಾಗಿದೆ ಎಂದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿ ತುಂಬಿ ನಾಡಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿಧಾನದ ಪ್ರತಿಕವಾಗಿರುವ ರಾಷ್ಟ್ರಧ್ವಜದ ಬದಲಾಗಿ ಕೆಂಪು ಕೋಟೆಯ ಮೇಲೆ ಮುಂದಿನ ದಿನದಲ್ಲಿ ಭಗವಾ ಧ್ವಜ ಹಾರಿಸಲಾಗುವುದು ಎನ್ನುವ ಸಚಿವ ಈಶ್ವರಪ್ಪನವರ ಹೇಳಿಕೆ ಅಕ್ಷಮ್ಯ ಅಪರಾಧ ಎಂದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಗ್ರಾಮೀಣ ಮತ್ತು ಪಂಚಾಯತ ರಾಜ್ ಖಾತೆಯ ಸಚಿವರಾದ ಈಶ್ವರಪ್ಪನವರು ತಮ್ಮ ಖಾತೆಯಲ್ಲಿ ಗ್ರಾಮೀಣ ಭಾಗದ ಜನತೆಗೆ ಮಾಡಲು ನೂರಾರು ಕೆಲಸಗಳಿದ್ದರೂ, ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ ಈಗ ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ತ್ರಿವರ್ಣ ಧ್ವಜ ನಮ್ಮ ದೇಶದ ಸಾರ್ವಭೌಮತ್ವದ ಸಂಕೇತವಾಗಿದ್ದು, ಇದನ್ನು ಒಪ್ಪಿಕೊಂಡು, ಅಪ್ಪಿಕೊಂಡಿದ್ದೇವೆ.ರಾಷ್ಟ್ರಧ್ವಜದ ಬದಲಾಗಿ ಭಗವಾಧ್ವಜ ಹಾರಿಸಲಾಗುವುದು ಎನ್ನುತ್ತಿರುವ ಈಶ್ವರಪ್ಪನವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ಮೇಲೆ ಎಫ್.ಆಯ್.ಆರ್. ದಾಖಲಿಸುವಂತೆ ಆಗ್ರಹಿಸಿದರು. ರಾಜ್ಯಪಾಲರು ಇವರ ಮೇಲೆ ಪ್ರಕರಣ ದಾಖಲಿಸಬೇಕು ಎನ್ನುವುದು ನಮ್ಮೆಲ್ಲರ ಒಕ್ಕೂರಲ ಅಭಿಪ್ರಾಯವಾಗಿದೆ ಎಂದರು.
ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ ಮನವಿಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಪಕ್ಷದ ಹಿರಿಯ ಮುಖಂಡರಾದ ಚಂದ್ರಶೇಖರ ಗೌಡ, ಕೃಷ್ಣ ಗೌಡ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ, ಬಾಲಚಂದ್ರ ನಾಯ್ಕ, ಹೊನ್ನಾವರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಮಹೇಶ, ರಾಜು ನಾಯ್ಕ ಮಂಕಿ, ವಿನೋದ ನಾಯ್ಕ ಕರ್ಕಿ, ಚಂದ್ರಕಾಂತ ಕೊಚ್ರೇಕರ, ಜಕ್ರಿಯಾ ಶೇಖ್, ಆಗ್ನೇಲ್ ಡಯಾಸ್, ಕೆ.ಎಚ್.ಗೌಡ, ಹರೀಶ್ಚಂದ್ರ ನಾಯ್ಕ, ಅಣ್ಣಯ್ಯ ನಾಯ್ಕ, ಕೃಷ್ಣ ಮಾರಿಮನೆ, ಮಹೇಶ ನಾಯ್ಕ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.