ಬೆಂಗಳೂರು: ಡೈನಮಿಕ್ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಹೊಸ ಸುದ್ದಿವಾಹಿನಿಯೊಂದು ಆರಂಭಗೊಳ್ಳುತ್ತಿರುವ ವಿಚಾರ ಹೊರಬಿದ್ದ ನಡುವೆಯೇ ಈ ಸುದ್ದಿವಾಹಿನಿ ಸಂಬಂಧಿಸಿ ಮತ್ತೊಂದು ಮಹತ್ವದ ಮಾಹಿತಿ ಸಿಕ್ಕಿದೆ. ದಿಗ್ವಿಜಯ ನ್ಯೂಸ್ ಚಾನೆಲ್ಲನ್ನು ಆರಂಭಿಕ ಹಂತದಿಂದ ಕಟ್ಟಿ ಬೆಳೆಸಿದ್ದ ಸ್ಟಾರ್ ಪತ್ರಕರ್ತರ ಜೋಡಿ ಹರಿಪ್ರಕಾಶ್ ಮತ್ತು ಎಂ. ಎಸ್. ಶರತ್ ಹೊಸ ಚಾನೆಲ್ ಮೂಲಕ ಮತ್ತೆ ಒಂದಾಗ್ತಿದ್ದಾರೆ. ನೂತನ ಚಾನೆಲ್ಗೆ ಹರಿಪ್ರಕಾಶ್ ಕೋಣೆಮನೆಯವರು ಸಿಇಒ ಹಾಗೂ ಎಡಿಟರ್ ಇನ್ ಚೀಫ್ ಆಗಿದ್ದರೆ, ಶರತ್ ಅವರು ಎಕ್ಸಿಕ್ಯುಟಿವ್ ಎಡಿಟರ್ ಆಗಿರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹರಿಪ್ರಕಾಶ್ ಅವರಂತೆಯೇ ಮಾಧ್ಯಮ ಕ್ಷೇತ್ರದಲ್ಲಿ ಶರತ್ ಅವರದೂ ಸಣ್ಣ ವಯಸ್ಸಿನಲ್ಲಿ ಹಿರಿಯ ಸಾಧನೆ ಹಿರಿಮೆ. ಟಿವಿ, ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡಿ 360 ಡಿಗ್ರಿ ಮೀಡಿಯಾ ಅನುಭವ ಹೊಂದಿರುವ ಯಶಸ್ವೀ ಪತ್ರಕರ್ತ. ಕಸ್ತೂರಿ ನ್ಯೂಸ್, ಟಿವಿ9, ಸಮಯ ನ್ಯೂಸ್, ವಿಜಯವಾಣಿ, ನ್ಯೂಸ್18 ಕನ್ನಡ, ದಿಗ್ವಿಜಯ ನ್ಯೂಸ್ನಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲೇ ಶರತ್ ಅವರಿಗೆ ನ್ಯೂಸ್ ಚಾನೆಲ್ ಸಂಪಾದಕ ಹೊಣೆಯನ್ನು ಹರಿಪ್ರಕಾಶ್ ಅವ್ರು ವಹಿಸುವುದರೊಂದಿಗೆ 31ನೇ ವಯಸ್ಸಿನಲ್ಲೇ ನ್ಯೂಸ್ ಚಾನೆಲ್ ಸಂಪಾದಕರಾದ ಹೆಗ್ಗಳಿಕೆ ಶರತ್ ಅವರದು. ಹರಿಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್ ಅನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ಶರತ್ ಕೊಡುಗೆ ಅಪಾರ.
ಇವರಿಬ್ಬರ ಅವಧಿಯಲ್ಲಿ ಗುಣಮಟ್ಟದ ಸುದ್ದಿ ಪ್ರಸಾರದಿಂದ ದಿಗ್ವಿಜಯ ನ್ಯೂಸ್ ಕಡಿಮೆ ಅವಧಿಯಲ್ಲಿ ಮುನ್ನೆಲೆಗೆ ಬಂದಿತ್ತು. ದಿಗ್ವಿಜಯ ನ್ಯೂಸ್ನಿಂದ ಹೊರಬಂದ ಬಳಿಕ ಇಂಡಿಯನ್ ಮನಿ ಡಾಟ್ ಕಾಂನ ಕಂಟೆಂಟ್ ಮತ್ತು ಕಮ್ಯೂನಿಕೇಷನ್ ವಿಭಾಗದ ಉಪಾಧ್ಯಕ್ಷರಾಗಿ ಶರತ್ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ಅನ್ನು ಆರಂಭಿಕ ಹಂತದಿಂದಲೂ ಕಟ್ಟಿರುವುದು ಶರತ್ ಟೀಂ. ಹಣಕಾಸು ನಿರ್ವಹಣೆ ಬಗ್ಗೆ ಮಾಹಿತಿ ನೀಡುವ ಈ ಆಪ್ ಸದ್ಯ 5 ಮಿಲಿಯನ್ ಡೌನ್ಲೋಡ್ಸ್ ಹೊಂದಿದ್ದು ಜಗತ್ತಿನ ಟಾಪ್ 12 ಸಾವಿರ ಆಪ್ಗಳಲ್ಲಿ ಇದೂ ಒಂದಾಗಿರುವುದು ವಿಶೇಷ. ಇದೀಗ ಇಂಡಿಯನ್ ಮನಿ ಡಾಟ್ ಕಾಂಗೆ ಶರತ್ ರಾಜೀನಾಮೆ ಸಲ್ಲಿಸಿರುವ ಮಾಹಿತಿ ಕನ್ನಡ ನ್ಯೂಸ್ನೌಗೆ ತಿಳಿದುಬಂದಿದೆ.
ವಿಜಯ ಕರ್ನಾಟಕ ಸಂಪಾದಕರಾಗಿರುವ ಹರಿಪ್ರಕಾಶ್ ಕೋಣೆಮನೆಯವರು ಟೈಮ್ಸ್ ಗ್ರೂಪ್ನಿಂದ ಹೊರಬಂದು ಹೊಸ ಸುದ್ದಿವಾಹಿನಿ ಆರಂಭಿಸುತ್ತಿರುವ ಬ್ರೇಕಿಂಗ್ನ್ಯೂಸ್ ಕಳೆದವಾರ ಹೊರಬಿದ್ದಿತ್ತು. ನ್ಯೂಸ್ ಚಾನೆಲ್ ಜೊತೆಗೆ ಎಂಟರ್ಟೇನ್ಮೆಂಟ್ ಹಾಗೂ ಮ್ಯೂಸಿಕ್ ಚಾನೆಲ್ಗಳನ್ನೂ ಆರಂಭಿಸುವ ಯೋಜನೆ ಇವರ ಮುಂದಿರುವುದು ಕನ್ನಡ ಮಾಧ್ಯಮ ಲೋಕದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಈ ವಾಹಿನಿಗಳ ಆರಂಭದ ನಿಟ್ಟಿನಲ್ಲಿ ಬಿರುಸಿನ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಡಿಜಿಟಲ್ ಮಾಧ್ಯಮ ಮತ್ತು ಸುದ್ದಿವಾಹಿನಿ ಆರಂಭಕ್ಕೆ ಅಗತ್ಯವಿರುವ ತಾಂತ್ರಿಕ ವ್ಯವಸ್ಥೆ ಮತ್ತು ತಂಡ ಬಹುತೇಕ ರೆಡಿಯಾಗಿದೆ. ಇದೀಗ ಹರಿಪ್ರಕಾಶ್-ಶರತ್ ಸ್ಟಾರ್ ಜೋಡಿ ಒಂದಾಗುವುದರೊಂದಿಗೆ ಮಾಧ್ಯಮ ಜಗತ್ತಿನಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.