ಅಂಕೋಲಾ: ತಾಲೂಕಿನ ಅಗಸೂರಿನ ಈಶ್ವರ ದೇವಸ್ಥಾನದ 12 ನೇ ವರ್ಧಂತಿ ಉತ್ಸವ ರವಿವಾರ ವಿಜ್ರಂಭಣೆಯಿಂದ ನಡೆಯಿತು.
ಗಣಹೋಮ, ವಿಶೇಷ ಪೂಜೆ ಪುರಸ್ಕಾರ ಮುಂತಾದ ಧಾರ್ಮಿಕ ಕಾರ್ಯಗಳನ್ನು ಹಾಗೂ ಅನ್ನ ಸಂತರ್ಪಣೆ ಕಾರ್ಯವನ್ನು ಕೈಗೊಳ್ಳಲಾಗಿದ್ದು ಊರ ನಾಗರಿಕರ ಸಹಯೋಗದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ಶ್ರೀ ಶಾಂತಿಕಾ ಪರಮೇಶ್ವರ ಟ್ರಸ್ಟ್ ವತಿಯಿಂದ ಆಚರಿಸಲಾಯಿತು. ಈ ನಿಮಿತ್ತ ಗ್ರಾಮದ ಎಲ್ಲ ದೇವರುಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ದೇವಸ್ಥಾನದಲ್ಲಿ ಈಶ್ವರ ಪಾರ್ವತಿ ಮತ್ತು ಗಣಪತಿ ದೇವರ ವಿಗ್ರಹಗಳಿದ್ದು ಎದುರಿಗೆ ನಂದಿ ಇರುವದು ವಿಶೇಷವಾಗಿದೆ. ದೇವಸ್ಥಾನವು ಪುರಾತನ ಕದಂಬರ ಕಾಲದ್ದಾಗಿದ್ದು ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು 2010 ರಲ್ಲಿ ಕೈಗೊಂಡು ನೂತನ ದೇವಸ್ಥಾನವನ್ನು ಕಟ್ಟಲಾಗಿತ್ತು. ಅಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರು ದೇವಸ್ಥಾನದ ನೂತನ ಕಟ್ಟಡವನ್ನು ಉದ್ಘಾಟಿಸಿದ್ದರು. ಕಟ್ಟಡ ಸಮಿತಿಯ ಆಗಿನ ಅಧ್ಯಕ್ಷರಾಗಿದ್ದ ವೆಂಕಟೇಶ ನಾರಾಯಣ ನಾಯಕ ಪ್ರತೀ ವರ್ಷ ವರ್ಧಂತಿ ಉತ್ಸವದ ಉಸ್ತುವಾರಿಕೆಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅರ್ಚಕ ವಿಶ್ವನಾಥ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಿದರು. ಸುಮಾರು 63 ವರ್ಷಗಳ ಹಿಂದೆ ದೇವಸ್ಥಾನದ ಕಳಸದ ಉತ್ಸವ ನೆರವೇರಿಸಲಾಗಿತ್ತು ಎನ್ನಲಾಗಿದೆ.
ವರ್ಧಂತಿ ಉತ್ಸವದ ಪ್ರಯುಕ್ತ ಗೆಳೆಯರ ಬಳಗದ ಆಶ್ರಯದಲ್ಲಿ ಪೆರ್ಡೂರು ಮೇಳದವರಿಂದ ಭೀಷ್ಮವಿಜಯ ಯಕ್ಷಗಾನ ನಡೆಯಿತು.