ಶಿರಸಿ: ಸದ್ಯ ಹಿಜಾಬ್ನ ಸಂಘರ್ಷವು ಒಂದು ವ್ಯವಸ್ಥಿತ ಷಡ್ಯಂತ್ರದ ಆಧಾರದಲ್ಲಿ ನಡೆಯುತ್ತಿದೆ, ಅದೇ ಜೀನ್ ಶಾರ್ಪ್ ಥಿಯರಿ ! ಜೀನ್ ಶಾರ್ಪ್ ಅಮೇರಿಕಾದ ಓರ್ವ ಸಮಾಜಶಾಸ್ತ್ರದ ಪ್ರಾಧ್ಯಾಪಕ, ಈ ಥಿಯರಿಯಲ್ಲಿ ಪ್ರಮುಖವಾಗಿ 4 ಅಂಶಗಳಿವೆ. ಧರಣಿ ಕೂರುವುದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವುದು, ಮಾಧ್ಯಮಗಳ ಮುಖಾಂತರ ಅಲ್ಲಿನ ವಿಧಾನಸಭೆಯಲ್ಲಿ ಚರ್ಚೆಯಾಗುವಂತೆ ಮಾಡುವುದು ಹಾಗೂ ಕೊನೆಯಲ್ಲಿ ಪ್ರಕರಣವನ್ನು ಕೋರ್ಟ್ಗೆ ತೆಗೆದುಕೊಂಡು ಹೋಗುವುದು ಹೀಗೆ ಹಂತಗಳನ್ನು ಈ ಥಿಯರಿಯು ಒಳಗೊಂಡಿದೆ. ಪ್ರಸ್ತುತ ಹಿಜಾಬ್ ನ ಸಂಘರ್ಷವೂ ಇದೇ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಉದ್ಯಮಿಗಳು ಹಾಗೂ ಚಲನಚಿತ್ರ ವಿತರಕರಾದ ಪ್ರಶಾಂತ ಸಂಬರ್ಗಿ ಇವರು ಹಿಜಾಬ್ ಸಂಘರ್ಷದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆದಿದ್ದಾರೆ.
ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಜಾಬ್ – ಭಾರತವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರವೇ ?’ ಈ ಆನ್ಲೈನ್ ವಿಶೇಷ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಸೌ. ಶುಭಾವತಿ ಬಿ. ನಾಯ್ಕ್ ಇವರು ಮಾತನಾಡುತ್ತಾ, ಸಂವಿಧಾನದ ಕಲಂ 25 ರಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ, ಆರೋಗ್ಯ ಹಾಗೂ ನೈತಿಕತೆಗೆ ಮತ್ತು ಅದರ ಉಪಬಂಧಗಳಿಗೆ ಯಾವುದೇ ತೊಂದರೆಯಾಗದೇ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಬೇಕು ಎಂದು ಹೇಳಲಾಗಿದೆ, ಈ ವಿದ್ಯಾರ್ಥಿಗಳು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ಮನಬಂದಂತೆ ವರ್ತಿಸುತ್ತಿದ್ದಾರೆ. 144 ಸೆಕ್ಷನ್ ಜಾರಿಯಾಗಿರುವಾಗಲೂ ಸ್ಟ್ರೈಕ್, ಗಲಾಟೆ ಮಾಡುತ್ತಾರೆ. ಇದು ಕಾನೂನು ಉಲ್ಲಂಘನೆ ಅಲ್ಲವೇ ? ಇವರು ಮೂಲಭೂತ ಕರ್ತವ್ಯಗಳನ್ನು ಪಾಲಿಸದೇ, ಇವರಿಗೆ ಲಾಭವಾಗುವ ಧಾರ್ಮಿಕ ಹಕ್ಕಿನ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.
ಈ ವೇಳೆ ವಿಶ್ವ ಸನಾತನ ಪರಿಷತ್ ನ ಅಧ್ಯಕ್ಷರಾದ ಎಸ್ ಭಾಸ್ಕರನ್ ಅವರು ಮಾತನಾಡುತ್ತಾ, ಇಂದು ಹಿಜಾಬ್ ಕೇಳುವವರು ನಾಳೆ ನಮ್ಮ ಕುರಾನ್ನಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡಲು ಹೇಳಿದ್ದಾರೆ ಎಂದು ಆಗ್ರಹಿಸುತ್ತಾರೆ. ಇದಕ್ಕೆ ಅವರಿಗಾಗಿ ಪ್ರತ್ಯೇಕ ನಮಾಜ್ ಸ್ಥಳ ಮಾಡಿಕೊಡಲು ಸಾಧ್ಯವಿದೆಯೇ ? ಮುಂದೆ ನಾವು ಹರಾಮ್ ಪದಾರ್ಥ ತಿನ್ನುವಂತಿಲ್ಲ ಹಾಗಾಗಿ ಕಾಲೇಜು ಕ್ಯಾಂಟೀನ್ನಲ್ಲಿ ನಮಗೆ ಹಲಾಲ್ ಪ್ರಮಾಣೀಕೃತ ಆಹಾರ ನೀಡಬೇಕು ಎನ್ನುತ್ತಾರೆ. ನಂತರ ನಮಗೆ ರವಿವಾರದ ರಜೆ ಬೇಡ ಶುಕ್ರವಾರವೇ ರಜೆ ಬೇಕು ಎಂದು ಕೇಳುತ್ತಾರೆ ಹೀಗೆ ಅವರು ನಮ್ಮ ಭಾರತವನ್ನು ಇಸ್ಲಾಮಿನ ಕಡೆಗೆ ಕರೆದೊಯ್ಯಲು ಇಚ್ಛಿಸುತ್ತಿದ್ದಾರೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ, ಈ ಎಲ್ಲ ಸ್ಥಿತಿಗಳನ್ನು ನೋಡುವಾಗ ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟಿರುವ ಷಡ್ಯಂತರ ಬಯಲಾಗುತ್ತಿದೆ. ಇದಕ್ಕೆ ಮುಂದಿನ ಉಪಾಯವೆಂದರೆ ಹಿಂದೂಗಳು ಜಾಗೃತರಾಗುವುದು ಮತ್ತು ಸಂಘಟಿತರಾಗುವುದು. ಹಾಗಾಗಿ ಈ ಎಲ್ಲ ಸಮಸ್ಯೆಗಳಿಗೆ ಒಂದೇ ಉತ್ತರವೆಂದರೆ ‘ಹಿಂದೂ ರಾಷ್ಟ್ರ’ವಾಗಿದೆ. ಅದಕ್ಕಾಗಿ ಎಲ್ಲ ಸಂಘಟನೆಗಳು ಮತ್ತು ಹಿಂದುತ್ವನಿಷ್ಠರು ಮನಸ್ಸಿನಿಂದ ಒಂದಾಗಬೇಕಿದೆ ಮತ್ತು ರಾಷ್ಟ್ರರಕ್ಷಣೆಗಾಗಿ ಸಮಯವನ್ನು ನೀಡಬೇಕಿದೆ ಎಂದು ಕರೆ ನೀಡಿದರು.