ಕಾರವಾರ: ಸರ್ಕಾರಿ ಶಾಲಾ ಕಾಲೇಜುಗಳಲ್ಲೇ ಯೂತ್ ಕ್ಲಬ್ ಪ್ರಾರಂಭಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕರ್ನಾಟಕ ಯುವ ನೀತಿ-2021 ರಚನೆ ಕುರಿತಂತೆ ಯುವ ಜನ ಅಭಿಪ್ರಾಯ ಸಂಗ್ರಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯುವಕ, ಯುವತಿ ಮಂಡಳಿಗಳ ನೊಂದಣಿಯಾಗುವುದು ಕಡಿಮೆ ಸಂಖ್ಯೆಯಲ್ಲಿ ಇವೆ, ಇರುವಂತಹವುಗಳು ಕೂಡ ಕ್ರಿಯಾತ್ಮಕವಾಗಿಲ್ಲವೆಂದಾದಲ್ಲಿ, ಸರಕಾರದಿಂದ ನಡೆಸಲ್ಪಡುವ ಮ್ಯಾಟ್ರಿಕ್ ನಂತರದ ವಸತಿ ನಿಲಯಗಳಿಗೆ ಭೇಟಿ ನೀಡಿ ಯೂತ್ ಕ್ಲಬ್ ಹಾಗೂ ಅದರಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದಲ್ಲಿ ಯುತ್ ಕ್ಲಬ್ಗಳ ಸಂಖ್ಯೆಯು ಹೆಚ್ಚಾಗುತ್ತವೆ ಮತ್ತು ಅವು ಕ್ರಿಯಾತ್ಮಕವಾಗಿ ಕೂಡ ಇರಲು ಅನಕೂಲವಾಗುತ್ತದೆ ಎಂದರು.
ಯುತ್ ಕ್ಲಬ್ ಗಳ ಮೂಲಕ, ಯುವ ಸಮೂಹಕ್ಕೆ ಸಿಗುವ ಸರ್ಕಾರದ ಸೌಲಭ್ಯ, ವೃತ್ತಿ ಸಮಾಲೋಚನೆ, ಉದ್ಯೋಗಕ್ಕೆ ಬೇಕಾಗುವ ಅಗತ್ಯ ಕೌಶಲ್ಯ, ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆಪ್ತ ಸಮಾಲೋಚನೆ ಮಾಡಿ ಯುವಜನರಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು.
ನೆಹರು ಯುವ ಕೇಂದ್ರದ ವತಿಯಿಂದ ಫೇಸ್ಬುಕ್ ಪೇಜ್ನ್ನು ರಚಿಸಿ. ಯಾವ ಇಲಾಖೆಯಿಂದ ಯುತ್ ಕ್ಲಬ್ಗಳು ಏನೇನು ಮಾಡಬಹುದು ಎಂಬ ಬಗ್ಗೆ ಮಾಹಿತಿ ಹಾಕಿದಲ್ಲಿ ಬಹಳಷ್ಟು ಯುವಕರನ್ನು ತಲುಪಬಹುದಾಗಿರುತ್ತದೆ. ಎರಡು ಮೂರು ವರ್ಷಗಳ ಹಿಂದೆ ಯುವಕ/ಯುವತಿ ಮಂಡಳಿಗಳಲ್ಲಿ ಏನು ಮಾಡಲಾಗುತ್ತಿತ್ತು ಎಂಬುದನ್ನು ಪಟ್ಟಿ ಮಾಡಿ, ಅವುಗಳೊಂದಿಗೆ ಈ ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡು ಕಾರ್ಯರೂಪಕ್ಕಿಳಿಸಿದಲ್ಲಿ ಜಿಲ್ಲೆಯ ಎಲ್ಲ ಯುತ್ ಕ್ಲಬ್ಗಳು ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಯುವ ನೀತಿ ಅಡಿಯಲ್ಲಿ ಯುವಕರಿಗೆ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಹಾಗೂ ಯುವ ಸ್ಪಂದನ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲ್ಲಿ ಜರುಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ಜಿಲ್ಲಾ ನೆಹರು ಯುವ ಕೇಂದ್ರದ ಅಧಿಕಾರಿ ಯಶವಂತ ಯಾಧವ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ ನಾಯಕ ಸೇರಿದಂತೆ ಇತರರು ಇದ್ದರು.