ಶಿರಸಿ: ಹೊಸಗನ್ನಡ ಕಾವ್ಯ ಪರಂಪರೆಯ ಹಿರಿಯ ತಲೆಮಾರಿನ ಕವಿಯೆಂದೇ ಹೆಸರುವಾಸಿಯಾಗಿದ್ದ ಕನ್ನಡದ ಖ್ಯಾತ ವಿದ್ವಾಂಸ, ಕನ್ನಡ ನಾಡಿನ ಸಮನ್ವಯ ಕವಿಯೆಂದೇ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದ ಶ್ರೀ ಚೆನ್ನವೀರ ಕಣವಿಯವರು ತಮ್ಮ ಅದ್ಭುತ ಕಾವ್ಯ ಪ್ರತಿಭೆಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸರಳ ಸಜ್ಜನಿಕೆಯ ಸದ್ಗುಣ ಸಂಪನ್ನ ಕವಿಯಾಗಿದ್ದರು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ.ಎಸ್. ಹೊರಟ್ಟಿ ಬಣ್ಣಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಚೆನ್ನವೀರ ಕಣವಿ, ನವೋದಯ ಹಾಗೂ ನವ್ಯ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಕನ್ನಡ ನಾಡು ನುಡಿ ಬೆಳವಣಿಗೆಗೆ ಸಲ್ಲಿಸಿದ್ದ ಅಪ್ರತಿಮ ಕೈಂಕರ್ಯವನ್ನು ಪರಿಗಣಿಸಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಅವರನ್ನು ಅರಸಿ ಬಂದಿದ್ದು ಅವರ ಸಾಹಿತ್ಯ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಭಾಪತಿಯವರು ಶ್ಲಾಘಿಸಿದ್ದಾರೆ.
ಚೆನ್ನವೀರ ಕಣವಿರವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದ್ದು, ಸಾಹಿತ್ಯ ಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕಂಬನಿ ಮಿಡಿದಿರುವ ಬಸವರಾಜ ಎಸ್. ಹೊರಟ್ಟಿ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಕಣವಿಯವರ ಕುಟುಂಬ ವರ್ಗದವರಿಗೆ ಮತ್ತು ಸಾಹಿತ್ಯ ಲೋಕದ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯಿಂದಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.