ಸಿದ್ದಾಪುರ: ಪುಸ್ತಕ ಬಿಡುಗಡೆ ಬೆಳಕನ್ನು ಬಿಡುಗಡೆಗೊಳಿಸುವಂತಹ ಅತ್ಯುತ್ತಮ ಕೆಲಸ. ಮಾನವೀಯ ಮೌಲ್ಯಗಳು ಇದ್ದಾಗ ಮಾತ್ರ ಮನುಷ್ಯರಾಗುತ್ತೇವೆ ಎಂದು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಬಾಲಭವನದಲ್ಲಿ ಸ್ಪಂದನ ಸೇವಾ ಸಂಸ್ಥೆ ಆಯೋಜಕತ್ವದಲ್ಲಿ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹಧನ ಪಡೆದ ಕವಯಿತ್ರಿ ಶಿಕ್ಷಕಿ ಸುಧಾರಾಣಿ ನಾಯ್ಕ ಬರೆದ ಮನದ ರಿಂಗಣ ಕವನ ಸಂಕಲನ ಬಿಡುಗಡೆ ಹಾಗೂ ಕವನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕವನ ಯಾವುದೇ ರೂಪದಲ್ಲಿ ಹೇಗೇ ಇರಲಿ ಅದಕ್ಕೆ ಹೃದಯ ಇರಬೇಕು. ನಮ್ಮ ಮನಸ್ಸಿಗೆ ತಟ್ಟುವಂತೆ ಇರಬೇಕು. ಮಾನವನ ಭಾವನೆಗಳನ್ನು ರೂಪಿಸುವ ಕೆಲಸ ಕವನಗಳಿಂದ ಆಗಬೇಕು. ಸಾಹಿತಿಗಳು ಸಾಮಾಜಿಕ ಭದ್ರತೆಯನ್ನು ಇಟ್ಟುಕೊಂಡು ಜವಾಬ್ದಾರಿಯುತವಾಗಿ ಸಮಾಜದಲ್ಲಿನ ಸಮಸ್ಯೆಗಳನ್ನು ಬಿಂಬಿಸುವಂತಹ ಬರಹಗಳನ್ನು ಬರೆಯಬೇಕು ಎಂದರು.
ನಮ್ಮ ಚಾರಿತ್ರವನ್ನು ಅವಲೋಕಿಸಿದಾಗ ಸ್ತ್ರೀಪರ ನಿಲುವು ಗಣ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಾತೃ ಪ್ರಧಾನ ವ್ಯವಸ್ಥೆಯ ಸ್ತ್ರೀಯರ ಕಡೆ ಕವಿಯತ್ರಿಯರು ಗಮನಹರಿಸಬೇಕು. ಇಂದಿನ ಧಾರವಾಹಿಗಳು, ಸಿನಿಮಾಗಳು ಕಾವ್ಯಗಳಲ್ಲಿ ಮನುಷ್ಯನ ತಳಮಟ್ಟದ ಬದುಕಿನ ಮೇಲೆ ಬದುಕು ಚೆಲ್ಲುವ ಕಾರ್ಯವಾಗಬೇಕು. ಸಾಹಿತಿಗಳು ಉತ್ತಮ ಬರಹವನ್ನು ಬರೆಯಲು ಅಧ್ಯಯನ ಹಾಗೂ ಅನುಭವದ ಅವಶ್ಯಕತೆ ಇದೆ. ಸುಧಾರಾಣಿ ನಾಯ್ಕ ಅವರ ಕವನಗಳು ಗಟ್ಟಿಯಾಗಿವೆ ಎಂದರು.
ಖ್ಯಾತ ಲೇಖಕಿ, ಕನ್ನಡ ಉಪನ್ಯಾಸಕಿ ಕಾತ್ಯಾಯಿನಿ ಕುಂಜುಬೆಟ್ಟು ಮಾತನಾಡಿ, ಮನುಷ್ಯ ದೇಹದೊಟ್ಟಿಗೆ ಬದುಕುವುದಿಲ್ಲ. ಅದರೊಳಗೆ ಒಂದು ಮನಸ್ಸಿದೆ ಅದರಲ್ಲಿ ನಾವು ಬದುಕಬೇಕು. ಇಂದಿನ ದಿನಮಾನದಲ್ಲಿ ಶಿಕ್ಷಣವು ಗಂಡು-ಹೆಣ್ಣು, ಮೇಲ್ಜಾತಿ-ಕೆಳಜಾತಿ ಎನ್ನುವ ಭೇದ ಭಾವದಲ್ಲಿ ಬದಲಾವಣೆಯನ್ನು ತಂದಿದೆ. ಮೌಲ್ಯಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಕಾವ್ಯಗಳು ಒಂದು ಮುಖ ಚಂದ, ಇನ್ನೊಂದು ಬೆಂದ ಮುಖದ ಬಗ್ಗೆಯೂ ಹೇಳುತ್ತದೆ. ಹೆಣ್ಣು ಮಕ್ಕಳು ಸಹ ಬರೆಯಬೇಕು. ಕಲಾತ್ಮಕ ದೃಷ್ಟಿಕೋನ ಸುಧಾರಾಣಿ ಅವರ ಬರಹದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಕವನ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಗಂಗಾಧರ ಕೊಳಗಿ, ಡಾ. ಶ್ರೀಧರ ವೈದ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮನದ ರಿಂಗಣ ಕವನ ಸಂಕಲನದ ಕವಯತ್ರಿ ಸುಧಾರಾಣಿ ನಾಯ್ಕ ವೇದಿಕೆಯಲ್ಲಿದ್ದರು.
ಚಿತ್ರಕಲಾವಿದ ನಾಗರಾಜ ಹನೇಹಳ್ಳಿ ಸ್ವಾಗತಿಸಿ, ಆಶಯ ನುಡಿಗಳನ್ನಾಡಿದರು. ಉಷಾ ನಾಯ್ಕ ನಿರೂಪಿಸಿದರು. ಶಿಕ್ಷಕಿಯರಾದ ಸುಮಿತ್ರಾ ಶೇಟ್ ಹಾಗೂ ಸುಮಾ ಹೆಗಡೆ ಕವನ ಸಂಕಲನದ ಕವನ ಗಾಯನ ಮಾಡಿದರು.