ಅಂಕೋಲಾ : ಹಟ್ಟಿಕೇರಿ ಹಾಗೂ ಮಾವಿನಕೇರಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಹಾರ್ಡ ಟೆನಿಸ್ ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭ ರವಿವಾರ ಹಟ್ಟಿಕೇರಿ ಆಸ್ಪತ್ರೆ ಹಿಂದಿನ ಮೈದಾನದಲ್ಲಿ ನಡೆಯಿತು.
ಸೀಮಿತ ಓವರಗಳ ಅಂತಿಮ ಪಂದ್ಯದಲ್ಲಿ ನಾಡವರ ರಾಕ್ಸ್ ಬೆಲೇಕೇರಿ ಮತ್ತು ಕರಾವಳಿ ಬಾಯ್ಸ ತಂಡದ ನಡುವೆ ನಡೆದ ಸೀಮಿತ ಓವರಗಳ ಫೈನಲ್ ಪಂದ್ಯದಲ್ಲಿ ನಾಡವರ ರಾಕ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಅಂಕೋಲಾ ತಾ.ಪಂ. ಸಹಾಯಕ ನಿರ್ದೇಶಕ ಸುನೀಲ ಅಧ್ಯಕ್ಷತೆ ವಹಿಸಿದ್ದರು. ಹಟ್ಟಿಕೇರಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ವಿಶಿಷ್ಟವಾದದ್ದು, ಜಾತಿವಾರು ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ 300ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದು ವಿನೂತನವಾಗಿತ್ತು ಎಂದರು.
ಅತಿಥಿಗಳಾಗಿ ಚಿನ್ನದಗರಿ ಯುವಕ ಸಂಘದ ಗೌರವಾಧ್ಯಕ್ಷ ವಿಲಾಸ ನಾಯಕ ಮಾತನಾಡಿ ಹಟ್ಟಿಕೇರಿಯಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯಾಗಲಿ ಯಲ್ಲಮ್ಮ ದೇವರ ಜಾತ್ರೆ ಉತ್ಸವವಾಗಲಿ ಎಲ್ಲ ಸಮುದಾಯದವರು ಸೌಹಾರ್ದಯುತವಾಗಿ ಆಚರಿಸುತ್ತಿದ್ದು ಇತರರಿಗೂ ಮಾದರಿಯಾಗುತ್ತಾರೆ ಎಂದರು.
ಆರಕ್ಷಕ ಸಿಬ್ಬಂದಿ ಮಂಜುನಾಥ ಲಕ್ಮಾಪುರ ಮಾತನಾಡಿ ತಮಗೆ ಹುಟ್ಟೂರಿನ ನಂತರ ಹಟ್ಟಿಕೇರಿ ಮಾವಿನಕೇರಿ ಅತೀ ಹೆಚ್ಚು ಪ್ರೀತಿ ವಿಶ್ವಾಸವನ್ನು ತೋರಿದ ಊರಾಗಿದೆ ಅದನ್ನು ಯಾವತ್ತೂ ಮರೆಯಲಾಗುವದಿಲ್ಲ ಎಂದರು.
ಅವರ್ಸಾ ಗ್ರಾ.ಪಂ.ಸದಸ್ಯ ಮಾರುತಿ ಬಿ ನಾಯ್ಕ, ಸಮಾಜ ಸೇವಕ ಗಣಪತಿ ಎಲ್ ನಾಯ್ಕ, ಪ್ರಥಮ ಪಾರಿತೋಷಕದ ಪ್ರಾಯೋಜಕರಾದ ಪ್ರಶಾಂತ ಶಾಂಬಾ ನಾಯ್ಕ, ದ್ವಿತೀಯ ಪಾರಿತೋಷಕದ ಪ್ರಾಯೋಜಕರಾದ ದಿಲೀಪ ಜೈವಂತ ನಾಯ್ಕ, ಹಟ್ಟಿಕೇರಿಯ ರೇಣುಕಾದೇವಿ ಯೂಥ್ ಕ್ಲಬ್ ಅಧ್ಯಕ್ಷ ರಾಮನಾಥ ಆರ್ ನಾಯ್ಕ, ರಂಗಭೂಮಿ ಕಲಾವಿದ ಗಿರೀಶ ಗೌಡ, ನಿವೃತ್ತ ಏ.ಎಸ್.ಐ ಸಿ ಡಿ ತಾಂಡೇಲ್, ಉದ್ದಿಮೆದಾರ ಪ್ರಶಾಂತ ಆಚಾರಿ, ಅಗ್ನಿಶಾಮಕ ದಳದ ಸಿಬ್ಬಂದಿ ರವಿರಾಜ ಬೂತೆ ಉಪಸ್ಥಿತರಿದ್ದರು.