ಶಿರಸಿ: ನೂಪುರ ನೃತ್ಯ ಶಾಲೆಯ ನೂಪುರನಾದ ವಾರ್ಷಿಕ ನೃತ್ಯೋತ್ಸವ ಫೆಬ್ರುವರಿ 19 ರಂದು ಶಿರಸಿಯ ಟಿಎಂಎಸ್ ಸಭಾಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ಜಿ.ಎಂ ಹೆಗಡೆ ಮುಳಖಂಡ ಅಧ್ಯಕ್ಷರು ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಶಿರಸಿ ಉದ್ಘಾಟಿಸಲಿದ್ದಾರೆ. ನಂತರ ನೂಪುರ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಶಿರಸಿಯ ಭಾಗದಲ್ಲಿ ಪ್ರಮುಖ ನೃತ್ಯಶಾಲೆ ಎನಿಸಿಕೊಂಡಿರುವ ನೃತ್ಯ ವಿದುಷಿ ಅನುರಾಧಾ ಹೆಗಡೆ ಅವರ ನೂಪುರ ನೃತ್ಯಶಾಲೆಯು ಭರತನಾಟ್ಯದಲ್ಲಿ ತನ್ನ ಹೊಸ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದಿದೆ. ನೂಪುರನಾದ ವಾರ್ಷಿಕ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ನೂಪುರ ನೃತ್ಯ ಶಾಲೆಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂಪುರ ನೃತ್ಯ ಶಾಲೆಯ ವೈಶಿಷ್ಟ್ಯತೆ:
ನೂಪುರ ನೃತ್ಯ ಶಾಲೆಯ ನೃತ್ಯ ಗುರು ವಿದುಷಿ ಶ್ರೀಮತಿ ಅನುರಾಧಾ ಹೆಗಡೆ ಶಿರಸಿಯ ಹೆಮ್ಮೆಯ ನೃತ್ಯ ಕಲಾವಿದೆ. ಕಳೆದ 16 ವರ್ಷಗಳಿಂದ “ನೂಪುರ ನೃತ್ಯಶಾಲೆ”ಯ ಮೂಲಕ ಅನೇಕ ನೃತ್ಯಾಸಕ್ತರಿಗೆ ನೃತ್ಯ ಬೋಧನೆ ಮಾಡುತ್ತಿದ್ದಾರೆ. ಇವರ ಬಳಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು kseeb ನಡೆಸುವ ಭರತನಾಟ್ಯ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆ ಗಳಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಅನೇಕ ಶಿಷ್ಯರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶಿಷ್ಯ ವೇತನಕ್ಕೂ ಭಾಜನರಾಗಿದ್ದಾರೆ.
ಸ್ಥಳೀಯ ವೇದಿಕೆಗಳಲ್ಲದೆ ನಾಡಿನ ಸುಪ್ರಸಿದ್ದ ಉತ್ಸವಗಳಲ್ಲಿ, ಪ್ರತಿಷ್ಟಿತ ವೇದಿಕೆ ಗಳಲ್ಲಿ ಅನುರಾಧಾ ಹೆಗಡೆಯವರು ತಮ್ಮ ಶಿಷ್ಯರೊಂದಿಗೆ ಕಾರ್ಯಕ್ರಮ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನೃತ್ಯಕಲೆ ಎಂಬುದು ಕೇವಲ ಮನರಂಜನೆ ಯ ಕಲೆ ಅಲ್ಲ, ಅದು ಮಾನವನ ಬಾಹ್ಯ ಹಾಗೂ ಆಂತರಿಕ ವ್ಯಕ್ತಿತ್ವ ವಿಕಸನದ ಸಾಧನ ಎಂಬ ತತ್ವ ದಲ್ಲಿ ನಂಬಿಕೆ ಇಟ್ಟ ಇವರು ನೃತ್ಯವನ್ನು ವಾಣಿಜಿಕರಣ ಗೊಳಿಸದೇ ನೃತ್ಯವನ್ನು ಸಾಧನೆಯ ಮಾರ್ಗವನ್ನಾಗಿ ಸ್ವೀಕರಿಸಿ ನೃತ್ಯಕಲಾ ಸೇವೆಯಲ್ಲಿ ತೊಡಗಿದ್ದಾರೆ.
ತಮ್ಮಲ್ಲಿ ನೃತ್ಯಾಭ್ಯಾಸಿಗಳಾಗಿ ಬಂದವರು ಕ್ರಮವಾಗಿ ನೃತ್ಯ ಕಲಾವಿದರಾಗಿ ರೂಪುಗೊಳ್ಳುವ ಬೆಳವಣಿಗೆಯ ಆನಂದ ವನ್ನು ಶಿರಸಿಯ ಕಲಾ ರಸಿಕ ರೊಡನೆ ಹಂಚಿಕೊಳ್ಳುವ ಉದ್ದೇಶದಿಂದ ನೂಪುರ ನೃತ್ಯ ಶಾಲೆ ಪ್ರತಿ ವರ್ಷ ನೃತ್ಯೋತ್ಸವವನ್ನು ಹಮ್ಮಿಕೊಳ್ಳುತ್ತಿದೆ.
19 ಫೆಬ್ರವರಿ ಶನಿವಾರ ಸಾಯಂಕಾಲ 5 ಗಂಟೆಗೆ ನೂಪುರ ನೃತ್ಯಶಾಲೆ ಯ ಶಿಕ್ಷಕಿ ಅನುರಾಧಾ ಹೆಗಡೆ ಯವರ ಮಾರ್ಗದರ್ಶನದಲ್ಲಿ ಅವರ ವಿದ್ಯಾರ್ಥಿಗಳಿಂದ “ನೂಪುರ ನಾದ ವಾರ್ಷಿಕ ನೃತ್ಯೋತ್ಸವ” ಜರುಗಲಿದೆ. ಕಾರ್ಯಕ್ರಮವನ್ನು ಜಿ ಎಂ ಹೆಗಡೆ ಮುಳ್ಖಂಡ (ಅಧ್ಯಕ್ಷರು, ಎಂ ಈ ಎಸ್ ಶಿಕ್ಷಣ ಸಂಸ್ಥೆ) ಇವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ನಟುವಾಂಗದಲ್ಲಿ ವಿದುಷಿ ಅನುರಾಧಾ ಹೆಗಡೆ ಹಾಗೂ ವಿದುಷಿ ಕುಮಾರಿ ಕೀರ್ತನ ಹೆಗಡೆ, ಹಾಡುಗಾರಿಕೆಯಲ್ಲಿ ವಿದುಷಿ ಹರಿಣಿ ಶ್ರೀಧರ್ ಬೆಂಗಳೂರು, ಮೃದಂಗ ದಲ್ಲಿ ವಿದ್ವಾನ್ ಜಿ ಎಸ್ ನಾಗರಾಜ್ ಬೆಂಗಳೂರು, ವಯಲಿನ್ ಲ್ಲಿ ವಿದ್ವಾನ್ ದಯಾಕರ್ ಬೆಂಗಳೂರು ಸಹಕರಿಸಲಿದ್ದಾರೆ.