ಶಿರಸಿ: ಟಿಎಮ್ಎಸ್ ತನ್ನ ಬ್ರಾಂಡಿನ ನೂತನ ಉತ್ಪನ್ನ ಸುರಕ್ಷಾ ಸಾವಯವ ಗೊಬ್ಬರವನ್ನು ಶನಿವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಬಿಡುಗಡೆಗೊಳಿಸಿದ್ದು, ರೈತರ ಬಳಕೆಗೆ ಅನುವು ಮಾಡಿಕೊಡಲಾಯಿತು.
ತಾಲೂಕಿನ ದಾಸನಕೊಪ್ಪದಲ್ಲಿರುವ ಎ ಪಿ ಎಮ್ ಸಿ ಪ್ರಾಂಗಣದಲ್ಲಿ ನೂತನ ಗೊಬ್ಬರದ ಉತ್ಪನ್ನ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹೆಬ್ಬಾರ್, ಇಂದು ವಾಣಿಜ್ಯ ಬೆಳೆಗಳ ಪ್ರಮಾಣ ವಿಸ್ತರಿಸಿದೆ. ಇಂಥ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿನ ಸಂಘಸಂಸ್ಥೆಗಳು ಎಪಿಎಂಸಿ ಸಹಕಾರ ಪಡೆದು ಖರೀದಿ ಕೇಂದ್ರ ಆರಂಭಿಸಬೇಕು. ಆ ಮೂಲಕ ರೈತರ ಹಿತ ಕಾಯಬೇಕು ಎಂದರು.
ಟಿಎಮ್ಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಮ್.ಹೆಗಡೆ ಹುಳಗೋಳ ಮಾತನಾಡಿ, ರೈತರಿಗೆ ಆರ್ಥಿಕವಾಗಿ ಹೆಚ್ಚಿನ ಬಲ ನೀಡಲು ಸಂಸ್ಥೆ ಪ್ರಯತ್ನಿಸುತ್ತಿದೆ. ಈ ಹಿಂದೆ ಹೈನೋದ್ಯಮಕ್ಕೆ ಅನುಕೂಲ ಮಾಡಕೊಡಲು ಮೇವಚ್ಚು ಘಟಕ ಆರಂಭಿಸಲಾಗಿತ್ತು. ಈಗ ಅಡಿಕೆಗೆ ಅನುಕೂಲ ಆಗುವಂತಹ ಅತ್ಯುತ್ತಮ ಗೊಬ್ಬರವನ್ನು ಹೊರತರಲಾಗಿದೆ. ಇದರಿಂದ ಉತ್ತಮ ಇಳುವರಿ ಬರಲಿದ್ದು, ರೈತರಿಗೆ ಅನುಕೂಲ ಆಗಲಿದೆ ಎಂದರು.
ಎಪಿಎಮ್ ಸಿ ಅಧ್ಯಕ್ಷ ಶಿವಕುಮಾರ ಗೌಡ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಶಿರಸಿ ಟಿಎಮ್ಎಸ್ ಅಭೂತ ಪೂರ್ವ ಹೆಜ್ಜೆ ಇಟ್ಟಿದೆ. ಅವರಿಂದಾಗಿ ದಾಸನಕೊಪ್ಪದಲ್ಲಿನ ಎಪಿಎಮ್ಸಿ ಜಾಗ ಸದ್ಭಳಕೆಯಾಗಿದೆ. ದಾಸನಕೊಪ್ಪ ಎಪಿಎಮ್ಸಿಗೆ ಜೀವ ಕಲ್ಪಿಸಿದೆ ಕೀರ್ತಿ ಟಿಎಮ್ಎಸ್ ಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಬದನಗೋಡ ಪಂಚಾಯಿತಿ ಅಧ್ಯಕ್ಷೆ ಗೀತಾ ಆಲೂರು ಇದ್ದರು.
ವಿಶೇಷ :
ದಾಸನಕೊಪ್ಪದಲ್ಲಿರುವ ಶಿರಸಿ ಎಪಿಎಮ್ ಸಿ ಪ್ರಾಂಗಣದಲ್ಲಿ ಟಿಎಮ್ಎಸ್ ಸಂಸ್ಥೆಯ ಮೇವಚ್ಚು ಘಟಕವಿದ್ದು, ಅದರ ಪಕ್ಕದಲ್ಲಿ ಗೊಬ್ಬರದ ಘಟಕ ನಿರ್ಮಾಣ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಸ್ಥಳದಲ್ಲಿ ಟಿಎಮ್ಎಸ್ ಸಂಸ್ಥೆಯ ಸೂಪರ್ ಮಾರ್ಕೆಟ್ ನಲ್ಲಿನ ಉತ್ಪನ್ನಗಳ ಮಾರಾಟ ಮಳಿಗೆಯನ್ನೂ ಇಡಲಾಗಿತ್ತು. ಸ್ಥಳೀಯ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಗೊಬ್ಬರದ ಮಾಹಿತಿ ಪಡೆದುಕೊಂಡರು.