ಕಾರವಾರ: ಕರಾವಳಿ ನಿಯಂತ್ರಣ ವಲಯ ಪ್ರದೇಶಗಳ ನದಿ ಪಾತ್ರಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿ/ಸಮುದಾಯಗಳನ್ನು ಗುರುತಿಸಲು ಆಸಕ್ತ ಅರ್ಜಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
2011 ರ ನವಂಬರ್ 8 ರ ಪೂರ್ವದಲ್ಲಿ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮರಳು ತೆಗೆಯಲು ತಾತ್ಕಾಲಿಕ ಪರವಾನಿಗೆ ಹೊಂದಿರುವ ವ್ಯಕ್ತಿಗಳು ಅಥವಾ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆಯನ್ನು ಕುಲಕಸುಬನ್ನಾಗಿ ಮಾಡುತ್ತಿದ್ದು, ಮೀನುಗಾರಿಕೆ ಇಲಾಖೆಯಿಂದ ಬೋಟು/ಡಿಂಗಿ/ನಾಡದೋಣಿಯನ್ನು ಹೊಂದಿರುವ ಬಗ್ಗೆ ದೃಢೀಕೃತ ನೊಂದಾಯಿತ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬಯಸುವವರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಾಗಿರುವ ಬಗ್ಗೆ ವಾಸಸ್ಥಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು ಮತ್ತು ನದಿ ತೀರಕ್ಕೆ ಹೊಂದಿಕೊಂಡಂತೆ ಮರಳು ದಾಸ್ತಾನು ಮಾಡಲು ದಾಸ್ತಾನು ಪ್ರದೇಶವನ್ನು ಹೊಂದಿರುವವರು ಅಥವಾ ಅಂತಹ ಜಮೀನು ಮಾಲೀಕರಿಂದ ನೋಂದಾಯಿತ ಒಪ್ಪಿಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ ಇವರ ಕಛೇರಿಯಲ್ಲಿ ಫೆ.14 ರಿಂದ ಪಡೆದು ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿದಾರರೇ ಖುದ್ದು ಸಹಿ ಮಾಡಿ ಫೆ.28 ರೊಳಗಾಗಿ ಕಛೇರಿಗೆ ಸಲ್ಲಿಸಬೇಕು. ನಿಗದಿಪಡಿಸಿರುವ ಕಡೆಯ ದಿನಾಂಕದ ನಂತರದಲ್ಲಿ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.