ಯಲ್ಲಾಪುರ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸ್ಯಾಮಸಂಗ್ ಕಂಪನಿ ಟಿವಿಯೊಂದನ್ನು ದೇಣಿಗೆಯಾಗಿ ನೀಡಲಾಯಿತು.
ಸ್ಯಾಮಸಂಗ್ ಕಂಪನಿಯ ಹಿರಿಯ ಉಪಾಧ್ಯಕ್ಷ ಬಾಲಾಜಿ ಹೊಲೂರ್ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಕ್ತಾ ಶಂಕರ್ ಅವರಿಗೆ ಟಿವಿಯನ್ನು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಅವರು, ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯವಿದೆ. ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯುವವರಿಗೆ ಹೆಚ್ಚು ಅವಕಾಶಗಳು ದೊರೆಯುತ್ತದೆ ಎಂದರು.
ಮುಖ್ಯಾಧ್ಯಾಪಕ ಮುಕ್ತಾ ಶಂಕರ್ ಮಾತನಾಡಿ, ವಿದ್ಯಾರ್ಥಿಗಳು ತಾಳ್ಮೆ ಹಾಗೂ ಸಹನೆಯನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆಗಳಿಗೆ ಹೆಚ್ಚಿನ ಆಧ್ಯತೆ ಕೊಡಬೇಕು ಎಂದರು.
ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದ ಪ್ರಾಚಾರ್ಯರಾದ ಎಸ್.ಎಲ್ ಭಟ್ಟ, ಶಿಕ್ಷಕರಾದ ಖೈರುನ್ನಿಸಾ ಶೇಖ್ ಇತರರು ಇದ್ದರು. ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ಶ್ಯಾಮಲಾ ಕೆರೆಗದ್ದೆ ಸ್ವಾಗತಿಸಿದರು. ನೀತಾ ನಾಯ್ಕ ಪ್ರಾರ್ಥಿಸಿದರು. ಮಹೇಶ ನಾಯ್ಕ ವಂದಿಸಿದರು.