ಹೊನ್ನಾವರ: ತಾಲೂಕಿನಲ್ಲಿ ಖಾಸಗಿ ಕಂಪನಿಗಳು ತೆರೆಯಲಾಗುತ್ತಿದ್ದು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೇ ಪರರಾಜ್ಯದವರಿಗೆ ಅವಕಾಶ ನೀಡುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅವಮಾನ. ತಾಲೂಕ ಆಡಳಿತ ಈ ಬಗ್ಗೆ ಎಚ್ಚರಿಕೆ ನೀಡಿ ಸ್ಥಳಿಯರಿಗೆ ಅನ್ಯಾಯವಾಗದಂತೆ ಗಮನಹರಿಸಬೇಕೆಂದು ಕರವೆ ತಾಲೂಕಧ್ಯಕ್ಷ ಮಂಜುನಾಥ ಗೌಡ ನೇತ್ರತ್ವದಲ್ಲಿ ಬುಧವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಕನ್ನಡ ಭಾಷೆ ಮಾಯವಾಗಿದ್ದು, ಆಂಗ್ಲ ಭಾಷೆ ರಾರಾಜಿಸುತ್ತಿದೆ. ಇಕೋ ಬೀಚ್ ಸಮೀಪ ಕನ್ನಡ ಧ್ವಜವನ್ನು ಅಪಮಾನ ಮಾಡುವ ನಿಟ್ಟಿನಲ್ಲಿ ಹಾರಿಸಲಾಗಿದೆ. ಪ್ರಶ್ನೆ ಮಾಡಿದರೆ ಉಡಾಪೆ ಉತ್ತರ ನೀಡುತ್ತಾರೆ. ಬಂದರು ಕಾಮಗಾರಿ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳು ತಾಲೂಕಿನಲ್ಲಿ ತೆರೆಯಲಾಗುತ್ತಿದೆ. ಆದರೆ ಇದರಲ್ಲಿ ಸ್ಥಳಿಯರಿಗೆ ಉದ್ಯೋಗವಿಲ್ಲ. ಬದಲಿಗೆ ಹೆಚ್ಚಿನವರು ನೆರೆ ರಾಜ್ಯದವರಿಗೆ ಉದ್ಯೋಗ ನೀಡುತ್ತಿದ್ದಾರೆ. ಇದು ನಾಡಿನ ಭಾಷೆ ಹಾಗೂ ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯವಾಗಿದೆ.
ನಮ್ಮ ರಾಜ್ಯದಲ್ಲಿ ಕನ್ನಡ ಧ್ವಜಕ್ಕೆ ಅಪಮಾನ ಆಗಲು ಕರವೇ ಸಂಘಟನೆ ಬಿಡುವುದಿಲ್ಲ. ತಾಲೂಕಿನಲ್ಲಿ ಕನ್ನಡ ನಾಮಫಲಕದ ಕುರಿತಾಗಿ ಎಚ್ಚರಿಕೆ ನೀಡಲಾಗಿದೆ. ಸ್ಥಳಿಯರಿಗೆ ಉದ್ಯೋಗದ ವಿಷಯದಲ್ಲಿ ಅನ್ಯಾಯವಾದರೆ ಸಂಘಟನೆ ನ್ಯಾಯಯುತವಾಗಿ ಹೋರಾಟ ನಡೆಸಲಾಗುವುದು ಎಂದು ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ವಿದ್ಯಾರ್ಥಿ ಘಟಕದ ನಿಖಿಲ್ ನಾಯ್ಕ ಪದಾಧಿಕಾರಿಗಳಾದ ತರುಣ ನಾಯ್ಕ, ಶಿವು ಗೌಡ, ರವಿ ನಾಯ್ಕ, ಸಂದೀಪ ಗೌಡ, ಯೊಗೀಶ ಗೌಡ, ಸುಮಂತ ಬೇರೊಳ್ಳಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.