ಕಾರವಾರ: 14 ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಬುಧವಾರ ತಾಲೂಕಿನ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ನೆರವೇರಿತು.
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿಯಲ್ಲಿ ಒಟ್ಟೂ 121 ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಪರಿಪೂರ್ಣ ಪೊಲೀಸ್ ತರಬೇತಿಯನ್ನು ಮುಗಿಸಿರುತ್ತಾರೆ. ಈ ಮಹಿಳಾ ಪ್ರಶಿಕ್ಷಣಾರ್ಥಿಗಳಲ್ಲಿ 26 ಪ್ರಶಿಕ್ಷಣಾರ್ಥಿಗಳು ಸ್ನಾತಕೋತ್ತರ ಪದವಿ, 13 ಪ್ರಶಿಕ್ಷಣಾರ್ಥಿಗಳು ಇಂಜಿನಿಯರಿಂಗ್ ಪದವಿ ಮತ್ತು 71 ಪ್ರಶಿಕ್ಷಣಾರ್ಥಿಗಳು ಪದವೀಧರರಾಗಿದ್ದು 03 ಜನ ವೃತ್ತಿಪರ ಶಿಕ್ಷಣ ಹಾಗೂ 06 ಜನ ಪ್ರಶಿಕ್ಷಣಾರ್ಥಿಗಳು ಪಿ.ಯು.ಸಿ ಶಿಕ್ಷಣ ಪೂರೈಸಿರುತ್ತಾರೆ. ಇವರುಗಳ ಆಕರ್ಷಕ ಪಥಸಂಚಲನದ ನಂತರ ಎಸ್. ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ಪ್ರಾಂಶುಪಾಲರು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಕಾರವಾರ, ರವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ನಿರ್ಗಮನ ಪಥಸಂಚಲನದಲ್ಲಿ ತರಬೇತಿಯ ಒಳಾಂಗಣ ಮತ್ತು ಹೊರಾಂಗಣ ಪರೀಕ್ಷೆಯಲ್ಲಿ ಹಾಗೂ ಬಂದೂಕುಗುರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಒಟ್ಟು 12 ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಬಾರಿಯ ತರಬೇತಿಯಲ್ಲಿ, ಮ.ಪಿ.ಸಿ. ಅಂಬಿಕಾ ಬಾಯಿ. ಕೆ. ಇವರು ಸರ್ವೋತ್ತಮ ಪ್ರಶಸ್ತಿಯನ್ನು ಪಡೆದರು. ಇವರು ಮೂಲತ: ಮೈಸೂರು ಜಿಲ್ಲೆಯವರಾಗಿದ್ದು ಬೆಂಗಳೂರು ನಗರ ಘಟಕದವರಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ದಿಲೀಪ್ ಎಸ್.ವಿ. ಪೋಲೀಸ್ ಉಪಾಧೀಕ್ಷಕರು, ಡಿ.ಎ.ಆರ್, ಮತ್ತು ಉಪ ಪ್ರಾಂಶುಪಾಲರು, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಕಾರವಾರ, ರವರು ಮುಖ್ಯ ಅತಿಥಿಯವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಪೊಲೀಸ್ ಅಧೀಕ್ಷಕರಾದ ಡಾ. ಸುಮನ ಪೆನ್ನೇಕರ ರವರು ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಕವಾಯತು ತಂಡಗಳ ಪರೀವಿಕ್ಷಣೆ ನಡೆಸಿ, ಕವಾಯತಿನ ವೀಕ್ಷಣೆಯ ನಂತರ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ, ಇತ್ತೀಚಿನ ದಿನಗಳಲ್ಲಿ ಮಹಿಳಾ ಪೊಲೀಸರು ಪುರಷ ಪೊಲೀಸ್ ಕರ್ತವ್ಯಕ್ಕೆ ಸಮಾನವಾಗಿ ಕರ್ತವ್ಯ ನಿರ್ವಹಿಸುವ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ನಿಮ್ಮ ಠಾಣೆಗಳಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಶುಭ ಹಾರೈಸಿದರು.
ಕಾರವಾರ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ರವರು ಸಮಾರಂಭದ ವಂದನಾರ್ಪಣೆ ಮಾಡಿದರು. ಸಮಾರಂಭದಲ್ಲಿ ಪೊಲೀಸ್ ಅಧಿಕಾರಿ ವರ್ಗದವರು, ಸಿಬ್ಬಂದಿ ವರ್ಗದವರು, ಮಾಧ್ಯಮ ಮಿತ್ರರು ಹಾಗೂ ಪ್ರಶಿಕ್ಷಣಾರ್ಥಿಗಳ ಪಾಲಕರು, ಬಂಧು ಮಿತ್ರರು ಉಪಸ್ಥಿತರಿದ್ದರು.