ಅಂಕೋಲಾ : ತಾಲೂಕಿನ ಮಂಜಗುಣಿಯ ಪುನೀತ ರಾಜಕುಮಾರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ ಪುನೀತ್ ನುಡಿನಮನ ಕವನ ಸ್ಪರ್ಧೆಯಲ್ಲಿ ಕಾರವಾರದ ದೇವಿದಾಸ ಎಲ್. ನಾಯ್ಕ ಪ್ರಥಮ, ಶಿರಸಿಯ ಡಿ.ಎಂ. ಭಟ್ ಕುಳವೆ ದ್ವಿತೀಯ, ಕುಮಟಾದ ನಿರಂಜ ಕೆ. ನಾಯಕ ತೃತೀಯ ಬಹುಮಾನ ಪಡೆದಿದ್ದಾರೆ.
ಗೋಕರ್ಣ ಸಿದ್ದೇಶ್ವರದ ಪ್ರವೀಣ ಬಾಬು ವಿ. ಮಹಾಲೆ, ಅಂಕೋಲಾ ಕಂತ್ರಿ ಮಾಧವನಗರದ ಪಲ್ಲವಿ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಗೆ ಜಿಲ್ಲೆಯ 60ಕ್ಕೂ ಅಧಿಕ ಜನರು ಸ್ಪರ್ಧಿಸಿದ್ದು, ಅದರಲ್ಲಿ ಸುಮಾರು 40 ಜನರು ಪ್ರಥಮ ಬಾರಿಗೆ ಪುನೀತ್ ರಾಜಕುಮಾರಗಾಗಿ ಕವನ ಬರೆದಿದ್ದರು. ಹೀಗಾಗಿ ಹಿರಿಯ ಸಾಹಿತಿಗಳ ಕವಿತೆಯನ್ನು ಸ್ಪರ್ಧೆಗೆ ಒಳಪಡಿಸದೆ ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು.
ಫೆ. 11ರಂದು ಸಂಜೆ 4 ಗಂಟೆಗೆ ಮಂಜಗುಣಿಯಲ್ಲಿ ನಡೆಯಲಿರುವ ಪುನೀತ ರಾಜಕುಮಾರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಹಾಗೇ ಆ ಕಾರ್ಯಕ್ರಮದಲ್ಲಿ ಎಲ್ಲರ ಕವಿತೆಗಳನ್ನು ಹೊಂದಿರುವ ‘ಪುನೀತ ನುಡಿನಮನ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಕವನ ಸ್ಪರ್ಧೆಗೆ ಡಾ. ರಾಮಕೃಷ್ಣ ಗುಂದಿ ನಿರ್ಣಾಯಕರಾಗಿದ್ದರು ಎಂದು ಸಮಿತಿಯ ಅಧ್ಯಕ್ಷ ನಾಗರಾಜ ಮಂಜಗುಣಿ, ಗೌರವಾಧ್ಯಕ್ಷ ಶ್ರೀಪಾದ ಟಿ. ನಾಯ್ಕ, ಕಾರ್ಯದರ್ಶಿ ಪ್ರಶಾಂತ ವಿ. ನಾಯ್ಕ, ಸಂಚಾಲಕ ಜಿ.ಆರ್. ತಾಂಡೇಲ ತಿಳಿಸಿದ್ದಾರೆ.