ಕಾರವಾರ: ಕರಾವಳಿ ಭಾಗದ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳವು ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕೂಡಲೇ ಕ್ರಮಕೈಗೊಂಡು, ಕಡಿವಾಣ ಹಾಕಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗೋ ರಕ್ಷಣಾ ಸಮಿತಿ ರಚಿಸಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ಜಿಲ್ಲಾಡಳಿತಕ್ಕೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳು ಕಳವು ಆಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ಸೂಕ್ಷ್ಮವಾಗಿ ಗಮಿನಿಸಿದ್ದೇನೆ. ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಗೋ ರಕ್ಷಣಾ ಸಮಿತಿ ರಚಿಸಿ, ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು, ಚಲನ-ವಲನ ಆಧರಿಸಿ, ಈ ಭಾಗದಲ್ಲಿ ರಾತ್ರಿ ಮತ್ತು ಹಗಲು ಪಾಳಿಗಳಲ್ಲಿ ಪೊಲೀಸರ ಬೀಟುಗಳನ್ನು ಹೆಚ್ಚಿಸಿ, ಚೆಕ್ ಪೋಸ್ಟ್ಗಳು, ನಾಕಾ ಬಂಧಿಗಳನ್ನು ಪರಿಣಾಮಕಾರಿಯಾಗಿ ಬಲಗೊಳಿಸಿ ತಪಾಸಣೆ ಮಾಡುವುದರಿಂದ ಗೋಪಾಲಕರಲ್ಲಿರುವ ಭಯದ ವಾತಾವರಣವನ್ನು ನಿರ್ಮೂಲನೆ ಮಾಡಿ ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ ಎನ್ನುವ ಸಂದೇಶ ಸಾರುವ ಕೆಲಸವಾಗಬೇಕಿಂದಿದ್ದಾರೆ.
ಈ ಭಾಗದಲ್ಲಿ ಗೋವುಗಳನ್ನು ಮಾರಾಟ ಮಾಡುವ ಮಾಲೀಕರು ಹಾಗೂ ಕೊಳ್ಳುವವರ ನಡುವೆ ಇ-ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪ್ರಕ್ರಿಯೆ ಕೈಗೊಂಡು, ಮುಚ್ಚಳಿಕೆ ಪ್ರಮಾಣ ಪತ್ರದಲ್ಲಿ ಸಮಯ, ಅದಕ್ಕೆ ಸಂಬಂಧಿಸಿದಂತೆ ಮೊಬೈಲುಗಳಲ್ಲಿರುವ ಡೇಟ್ ಕ್ಯಾಮೆರಾ ಆಪ್ಗಳಲ್ಲಿ ಸಮಯ ಸಮೇತ ಭಾವಚಿತ್ರವನ್ನು ಸೆರೆ ಹಿಡಿದುಕೊಂಡು ಗೋವುಗಳನ್ನು ಸಾಗಿಸುವ ವಾಹನಗಳು ಪೊಲೀಸರ ತಪಾಸಣೆ ಸಮಯದಲ್ಲಿ ಹಾಜರುಪಡಿಸಬೇಕು. ಹಾಗೊಂದು ವೇಳೆ ಸಂಶಯ ಬಂದ ಪಕ್ಷದಲ್ಲಿ ಈ ಕುರಿತು ತಪಾಸಣೆ ನಡೆಸಿದ ನಂತರದಲ್ಲಿ ಖಚಿತತೆ ಆಧಾರದ ಮೇರೆಗೆ ವಾಹನಗಳನ್ನು ಬಿಟ್ಟು ಕಳುಹಿಸುವ ಬಗ್ಗೆ ಕೂಡಲೇ ಠಾಣಾಧಿಕಾರಿಗಳು ಸ್ಥಳೀಯವಾಗಿ ಕ್ರಮಕೈಗೊಳ್ಳಬೇಕು ಎಂದು ಸಚಿವರು ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದರೂ ಸಹ ಗೋವುಗಳ ಕಳವು ಪ್ರಕರಣಗಳು ಮತ್ತು ಅಕ್ರಮ ಗೋವುಗಳ ಸಾಗಾಣಿಕೆ ಮುಂದುವರೆದಿದ್ದು, ನಿರಂತರವಾಗಿ ಗೋವುಗಳನ್ನು ಕಳವು ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಗಡಿ ಪಾರು ಮಾಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದರಿಂದ ಗೋವು ಕಳವು ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ.
ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗೋವುಗಳ ಕಳವು ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂಜಾಗ್ರತೆ ವಹಿಸಬೇಕು. ಗೋಪಾಲಕರ ಕುಟುಂಬಗಳನ್ನು ಕಳ್ಳರಿಂದ ರಕ್ಷಣೆ ಮಾಡಲು ವಿಫಲವಾದ ಪಕ್ಷದಲ್ಲಿ ಆ ಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮಕೈಗೊಳ್ಳುವ ಬಗ್ಗೆ ಸರ್ಕಾರದ ಹಂತದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವ ಮೂಲಕ ಗೋವುಗಳ ಕಳವು ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮವಹಿಸುವಂತೆ ಅವರು ಸೂಚಿಸಿದ್ದಾರೆ.