ಹೊನ್ನಾವರ : ತಾಲೂಕಿನ ಗೇರುಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಯ ನೂತನ ರಥದ ಭೂಸ್ಪರ್ಶ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಂತೆ ವಿಜ್ರಂಭಣೆಯಿಂದ ಸಂಪನ್ನವಾಯಿತು.
ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಯ ಸನ್ನಿಧಿಯಲ್ಲಿ ನೂತನ ರಥದ ಭೂ ಸ್ಪರ್ಶ ಕಾರ್ಯಕ್ರಮವು ಪ್ಲವನಾಮ ಸಂವತ್ಸರದ ಮಾಘ ಶುಕ್ಲ ಬಿದಿಗೆ ಬುಧವಾರದಂದು ರಾತ್ರಿ ಪುಣ್ಯಾಹ, ರಾಕ್ಷೋಘ್ನ ಬಲಿ ಮತ್ತು ಮಾಘ ಶುಕ್ಲ ತದಿಗೆ ಗುರುವಾರ ಬೆಳಿಗ್ಗೆ 9-38ರ ಸಮಯದ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಮಠಾದೀಶ ಪರಮಪೂಜ್ಯ ಅನಂತ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಪೀಠಾದೀಶ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ನೆರವೇರಿತು. ಪಂಚವಾದ್ಯದೊಂದಿಗೆ ನೂತನ ರಥ ಪೂಜೆ,ಫಲ,ಕಾಣಿಕೆ ಸಮರ್ಪಣೆ,ಮಹಾ ಮಂಗಳಾರತಿಯೊಂದಿಗೆ ಜರುಗಿತು.
ನೂತನ ರಥದ ಭೂ ಸ್ಪರ್ಶ ಕಾರ್ಯಕ್ರಮವು ಸಿಗಂದೂರು ಚೌಡೇಶ್ವರಿ ದೇವಳದ ಧರ್ಮದರ್ಶಿಗಳಾದ ಡಾ.ರಾಮಪ್ಪನವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು. ನೂತನ ರಥ ಲೋಕಾರ್ಪಣೆಯಲ್ಲಿ ಪಾಲ್ಗೊಂಡು ದೇವಿಯ ನಂಬಿದ ಭಕ್ತರ ನ್ಯಾಯಯುತ ಬೇಡಿಕೆ,ಅಭಿಷ್ಠಗಳೆಲ್ಲ ಈಡೇರಲಿ, ಈ ದೇವಾಲಯವು ಉತ್ತಮೋತ್ತಮ ರೀತಿಯಲ್ಲಿ ಅಭಿವೃದ್ದಿ ಹೊಂದುತ್ತಾ,ಜಗತ್ ಪ್ರಸಿದ್ದಿಗೊಳ್ಳಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಮಂಕಾಳ ವೈದ್ಯ ಅವರು ಈ ಶುಭಗಳಿಗೆಯಲ್ಲಿ ಪಾಲ್ಗೊಂಡು ಊರನಾಗರಿಕರು ಹಾಗೂ ಡಾ.ರಾಮಪ್ಪನವರ ಜೊತೆ ಸೇರಿ ದೇವಾಲಯದ ಸ್ಥಳದಲ್ಲಿರುವ ನೂತನ ಬ್ರಹ್ಮರಥ ಎಳೆದು ಗುತ್ತಿಕನ್ನಿಕಾ ನಗರ ದೇವಿಯ ದೇವಿ ದರ್ಶನ ಪಡೆದರು. ದೇವಾಲಯದ ಆವಾರದಲ್ಲಿನ ಪುಷ್ಪ ರಥವನ್ನು ಸಹ ಇದೇ ವೇಳೆ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದರು. ರಥಕ್ಕೆ ಸಮರ್ಪಿಸಿದ ಕಾಣಿಕೆ,ಫಲ,ಪುಷ್ಪವನ್ನು ಭಕ್ತರೆಡೆಗೆ ಎಸೆದರು. ಕಾಣಿಕೆಯನ್ನು ಪ್ರಸಾದ ರೂಪದಲ್ಲಿ ಪಡೆದ ಭಕ್ತರು,ರಥಕ್ಕೆ ನಮಸ್ಕರಿಸಿ ದೇವಿ ದರ್ಶನ ಪಡೆದು ಪುನಿತರಾದರು. ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಗೆ ಮಹಾಪೂಜೆ ನೇರವೇರಿತು.
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋವಿಂದ ನಾಯ್ಕ ಮಾತನಾಡಿ ಇಂದಿನ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಅಮೃತಗಳಿಗೆಯಾಗಿದೆ. ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಯು ಬ್ರಹ್ಮ ರಥದಲ್ಲಿ ವಿರಾಜಮಾನವಾಗಿರುವುದು ಕಣ್ತುಂಬಿಕೊಳ್ಳುವ ಬಹುವರ್ಷದ ಕನಸಾಗಿತ್ತು. ಇದಿಗ ನೂತನ ರಥದ ಲೋಕಾರ್ಪಣೆ ಮೂಲಕ ನೆರವೇರಲಿದೆ. ದೇವಿಯ ಸನ್ನಿದಿಯಲ್ಲಿ ಫೆ.12 ರಿಂದ 16ರವರೆಗೆ ರಥೊತ್ಸವ ನಡೆಯಲಿದೆ. ಫೆ. 14ರಂದು ಪುಷ್ಪ ರಥೋತ್ಸವ ಫೆ. 15ರಂದು ಬ್ರಹ್ಮರಥೋತ್ಸವ ಜಾತ್ರಾ ಮಹೋತ್ಸವ ಜರುಗಲಿದೆ ಎಂದರು.
ನಂತರ ನಡೆದ ಸಭಾ ಕಾರ್ಯಕ್ರಮಕ್ಕೆ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಅವರು ಚಾಲನೆ ನೀಡಿ, ಯಾವ ಗ್ರಾಮದಲ್ಲಿ ದೇವಾಲಯಗಳು ಅಭಿವೃದ್ಧಿ ಹೊಂದುತ್ತದೆಯೋ, ಅಂತಹ ಗ್ರಾಮವು ಅಭಿವೃದ್ದಿಯಾಗಲಿದೆ. ಹಲವು ಐತಿಹಾಸಿಕ ಹಿನ್ನಲೆಯುಳ್ಳ ಈ ಸನ್ನಿದಿಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಮನದಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿಯುವುದು ಈ ಕ್ಷೇತ್ರದ ವಿಶೇಷವಾಗಿದೆ. ಇಲ್ಲಿಯ ರಥದ ನಿರ್ಮಾತೃರಾದ ಗಂಗಾಧರ ಆಚಾರ್ಯಯವರು ಈವರೆಗೆ 34 ರಥ ನಿರ್ಮಾಣ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಇವರ ಕಾರ್ಯ ಪೆÇತ್ಸಾಹಿಸಲು ಸರ್ಕಾರದಿಂದ ಗೌರವ ನೀಡಲು ಈಗಾಗಲೇ ಪ್ರಯತ್ನದಲ್ಲಿದ್ದು, ಮುಂದೆ ಆ ಕಾರ್ಯು ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಥ ಶಿಲ್ಪಿಗಳಾದ ಇಡಗುಂಜಿಯ ಗಂಗಾಧರ ಆಚಾರ್ಯ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಎಲ್ಲಾ ಶಿಲ್ಪಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋವಿಂದ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಪಕರಾದ ಗಜಾನನ ನಾಯ್ಕ, ಗಂಗಾಧರ ಪುರೋಹಿತ, ಆಡಳಿತ ಮಂಡಳಿಯ ಉಪಾಧ್ಯಕ್ಷ ರಮೇಶ ನಾಯ್ಕ, ಸದಸ್ಯ ಎಸ್.ಕೆ.ನಾಯ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಹಾಂಮಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿದವು. ಸಾಯಂಕಾಲ ಹರಿಕಥಾ ವಿದುಷಿ ಶಿಲ್ಪ ನಾಯ್ಡು ಇವರಿಂದ ಹರಿಕಥಾ ಕಾರ್ಯಕ್ರಮ ಜರುಗಿತು.