ಅಂಕೋಲಾ : ಗೋಮಾಳ-ಗೈರಾಣು ಮುಂತಾದ ಜಮೀನುಗಳ ಖಾಸಗೀ ಸಂಸ್ಥೆಗಳಿಗೆ ನೀಡುವ ರಾಜ್ಯ ಸರಕಾರದ ಪ್ರಸ್ತಾಪಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಸರಕಾರವು ಗೋಮಾಳ, ಗೈರಾಣು, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಮುಂತಾದ ಜಮೀನುಗಳನ್ನು ಅದರಲ್ಲಿ ಹಾಲಿ ಸಾಗುವಳಿ ನಿರತ ಬಡ ರೈತ ಹಾಗೂ ಕೃಷಿ ಕೂಲಿಕಾರರು ಮತ್ತು ಕಸುಬುದಾರರುಗಳನ್ನು ಒಕ್ಕಲೆಬ್ಬಿಸಿ ಖಾಸಗಿ ಸಂಸ್ಥೆಗಳಿಗೆ ನೀಡುವ ದುರುದ್ದೇಶದಿಂದ ಒಂದು ನೀತಿಯನ್ನು ರೂಪಿಸಲು ಸಚಿವರ ಉಪ ಸಮಿತಿ ರಚಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಬಲವಾಗಿ ಖಂಡಿಸಿದೆ.
ಈ ಬಡ ರೈತರು, ಕೃಷಿಕೂಲಿಕಾರರು, ಇಂತಹ ದಶ ಲಕ್ಷಾಂತರ ಎಕರೆ ಪ್ರದೇಶಗಳನ್ನು, ತಮ್ಮ ಸ್ವಂತ ಕುಟುಂಬದ ಶ್ರಮ ಮತ್ತು ದುಬಾರಿ ಬಡ್ಡಿ ಸಾಲದ ಬಂಡವಾಳದಿಂದ ಅಭಿವೃದ್ಧಿ ಪಡಿಸಿ ಫಲವತ್ತಾದ ಕೃಷಿ ಯೋಗ್ಯ ಜಮೀನುಗಳನ್ನಾಗಿಸಿದ್ದಾರೆ. ಅವುಗಳಲ್ಲಿ ದಶ ಲಕ್ಷಾಂತರ ಟನ್ ಗಳಷ್ಠು ಬೆಳೆಯನ್ನು ಬೆಳೆದು, ರಾಜ್ಯದ ಆಹಾರದ ಭದ್ರತೆಗೆ ಹಾಗೂ ಆಂತರಿಕ ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ಕಾರಣೀ ಭೂತರಾಗಿದ್ದಾರೆ.
ಇಂತಹ ಬಹುತೇಕ ರೈತರು ಈಗಾಗಲೇ ಹಕ್ಕು ಪತ್ರಕ್ಕಾಗಿ ಕರ್ನಾಟಕ ಸರಕಾರದ ಕರೆಯಂತೆ ಫಾರಂ- 57 ಭರ್ತಿ ಮಾಡಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಇನ್ನು ಹಲವರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ, ಸರಕಾರದ ಈ ನಡೆಯು, ಈ ಎಲ್ಲ ಬಡವರ ಹಾಗೂ ದಲಿತರ ವಿರೋಧಿಯಾದ ನಡೆಯಾಗಿದೆ. ಮಾತ್ರವಲ್ಲಾ, ಬಡವರನ್ನು ವಂಚಿಸಿ ಕಾಪೆರ್Çರೇಟ್ ಕಂಪನಿಗಳಿಗೆ ವಹಿಸಿಕೊಡುವ ದುರ್ನಡೆಯಾಗಿದೆ.
ಆದ್ದರಿಂದ, ರಾಜ್ಯ ಸರಕಾರ ತಕ್ಷಣವೇ ಬಡವರು ಅಭಿವೃದ್ಧಿ ಪಡಿಸಿದ ಈ ಜಮೀನುಗಳನ್ನು ಖಾಸಗೀ ಸಂಸ್ಥೆಗಳಿಗೆ ವಹಿಸುವ ಕ್ರಮವನ್ನು ಈ ಕೂಡಲೇ ನಿಲ್ಲಿಸಬೇಕು. ಅಂತಹ ಬಡವರ ವಿರೋಧಿ ಹಾಗೂ ಲೂಟಿಕೋರ ಕಾರ್ಪೊರೇಟ್ ನೀತಿಗಾಗಿ ರಚಿಸಲಾದ ಸಚಿವರ ಉಪ ಸಮಿತಿಯನ್ನು ರದ್ದು ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.
ಅದೇ ರೀತಿ, ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿ, ನಗರ ಹಾಗೂ ಗ್ರಾಮಿಣ ಪ್ರದೇಶದ ಫಾರಂ- 57 ಸಲ್ಲಿಸದ ಎಲ್ಲ ಬಡ ಸಾಗುವಳಿದಾರರಿಗೆ ಹೊಸದಾಗಿ ಅರ್ಜಿ ಹಾಕಿಕೊಳ್ಳಲು ಅವಕಾಶ ನೀಡಬೇಕು ಮತ್ತು ಈಗಾಗಲೇ ಸಲ್ಲಿಸಲಾದ ಅರ್ಜಿಗಳ ವಿಲೇವಾರಿಗಾಗಿ ಭೂ ಮಂಜೂರಾತಿ ಸಮಿತಿಗಳನ್ನು ರಾಜ್ಯದಾದ್ಯಂತ ನೇಮಕ ಮಾಡಬೇಕು ಹಾಗೂ ಹಕ್ಕು ಪತ್ರ ನೀಡಬೇಕೆಂದು ಅವರು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಹಶೀಲ್ದಾರ ಉದಯ ಕುಂಬಾರ ಮನವಿ ಸ್ವೀಕರಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಸಹಕಾರ್ಯದರ್ಶಿ ಉದಯ ನಾಯ್ಕ, ಸದಸ್ಯ ಶೇಖ್ ಇಸೂಬ್ ಮುಂತಾದವರು ಹಾಜರಿದ್ದರು.