ಕಾರವಾರ: ಶಿಕ್ಷಣ ಇಲಾಖೆಗೆ ಅದರದ್ದೇ ಆದ ನೀತಿ, ನಿಯಮಗಳಿವೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ನಿಲುವು, ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಹಾಗೂ ಮನವಿಗಳನ್ನು ಸ್ವೀಕರಿಸಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಸಮವಸ್ತ್ರದ ಕುರಿತಾಗಿ ನ್ಯಾಯ ಕೇಳಬೇಕೆಂಬ ಆಶಯವಿದ್ದವರು ಕೋರ್ಟ್ ಮೆಟ್ಟಿಲೇರಿರಬಹುದು. ಆದರೆ ಸರ್ಕಾರ ಮತ್ತು ಇಲಾಖೆಯ ನಿಲುವು, ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ವ್ಯಕ್ತಿಗತ ಅಭಿಪ್ರಾಯಗಳಿದ್ದರೆ ನಾವು ನಾವೇ ಅದನ್ನು ಗೌರವಿಸಿಕೊಳ್ಳಬೇಕು ಅದು ಧರ್ಮ. ಆದರೆ ಶಿಕ್ಷಣ ಇಲಾಖೆಯಲ್ಲಿರುವ ನಿಯಮವೇ ಅಂತಿಮ ಎಂದರು.
ಸಿಎಂ ದೆಹಲಿಗೆ ತೆರಳುತ್ತಿದ್ದು, ಸಚಿವ ಸಂಪುಟ ಪುನರ್ ರಚನೆಯ ಸುದ್ದಿಯಿದೆ. ಹೀಗಾಗಿ ಈಗಿರುವ ಕೆಲ ಸಚಿವರು ಅಸಮಾಧಾನ ಹೊರಹಾಕುತ್ತಿದ್ದಾರೆಂಬ ಎನ್ನುವ ಪ್ರಶ್ನೆಗೆ ಪತಿಕ್ರಿಯಿಸಿದ ಅವರು, ಕೆಲವು ಇಲಾಖೆಗಳಿಗೆ ಮಂಜೂರಾತಿ ಪಡೆಯಲು ಮತ್ತು ಕೆಲವು ಆಡಳಿತಾತ್ಮಕ ವಿಚಾರಗಳ ಚರ್ಚೆಗೆ ತಾವು ದೆಹಲಿಗೆ ಹೋಗಿಬರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.
ಸ್ವಾಭಾವಿಕವಾಗಿ ನಮ್ಮ ಪಕ್ಷದಲ್ಲಿರುವ ಹಿರಿಯ ಶಾಸಕರು ತಮ್ಮ ಭಾವನೆಗಳನ್ನು ಕೇಂದ್ರ ಮಂತ್ರಿಗಳು, ಮುಖ್ಯಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷರ ಮುಂದೆ ಹೇಳಿಕೊಳ್ಳುತ್ತಾರೆ. ಅದು ಅವರ ಅಭಿಪ್ರಾಯ ಅಷ್ಟೇ. ಆಡಳಿತಾತ್ಮಕ ನಿರ್ಧಾರ, ಪಕ್ಷ ಸಂಘಟನೆ ಮುಂತಾದ ವಿಚಾರಗಳನ್ನು ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ. ಇದರಲ್ಲಿ ಬೇರೆ ಚರ್ಚೆಯೇ ಇಲ್ಲ. ಕೆಲವು ಶಾಸಕರು ನಮಗೆ ಅವಕಾಶ ಕೊಡಿ ಎನ್ನುತ್ತಾರೆ. ಹಿರಿಯ ಶಾಸಕರು ಇನ್ನೊಂದು ಹೇಳುತ್ತಾರೆ. ಎಲ್ಲವನ್ನೂ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿಗಳು, ರಾಜ್ಯದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ದೊಡ್ಡವರ ತೀರ್ಮಾನಕ್ಕೆ ನಾವು ಬದ್ಧವರಾಗಿರುತ್ತೇವೆ ಎಂದರು.
ಪಕ್ಷದಲ್ಲಿ ಹಿರಿಯ ನಾಯಕರ ನಿರ್ದೇಶನದಂತೆ ಮುಂದುವರಿಯುತ್ತೇವೆ. ನಮ್ಮಲ್ಲಿ ಭಿನ್ನಮತವೇ ಇಲ್ಲ. ಸರ್ಕಾರ, ರಾಜಕಾರಣ ಅಂದಾಗ ಬೇಡಿಕೆ ಹೆಚ್ಚಿದ್ದು, ಅವಕಾಶ ಕಡಿಮೆ ಇದ್ದಾಗ ಆತಂಕದಿಂದ ಕೆಲವರು ಹೇಳಿಕೊಂಡಿರಬಹುದು. ಮೊದಲಿನಿಂದಲೂ ನಡೆದುಕೊಂಡು ಬಂದ ರೂಢಿ. ಇದಕ್ಕೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಯಾರಲ್ಲೂ ಅಭಿಪ್ರಾಯ ಭೇದವಿಲ್ಲ. ಯಾವುದೇ ಗೊಂದಲವಿಲ್ಲದೇ ಸಮಸ್ಯೆ ಪರಿಹಾರವಾಗುತ್ತದೆ. ಎಲ್ಲರೂ ಒಟ್ಟಾಗಿದ್ದೇವೆ ಎಂದರು. ಗೋಮಾಳ ವಿವಾದಕ್ಕೆ ಸಂಬಂಧಿಸಿದಂತೆ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
100 ಕ್ಕೂ ಅಧಿಕ ಮನವಿ ಸ್ವೀಕಾರ:
ವಿವಿಧ ಭಾಗಗಳಿಂದ ಆಗಮಿಸಿದ ಸಾರ್ವಜನಿಕರಿಂದ ಲಿಖಿತ ರೂಪದಲ್ಲಿ 75 ಕ್ಕಿಂತ ಹೆಚ್ಚಿನ ಅಹವಾಲು, ವಿವಿಧ ಇಲಾಖೆಗಳ ಯೋಜನೆಗಳಿಗೆ ಸಂಬಂಧಿಸಿದಂತೆ 25 ಅರ್ಜಿ ಸೇರಿದಂತೆ ಒಟ್ಟಾರೆ 100 ಕ್ಕಿಂತ ಹೆಚ್ಚಿನ ಮನವಿಗಳನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವೀಕರಿಸಿದರು.