ಶಿರಸಿ: ಜೌಗು ಭೂಮಿ ವಿಶ್ವದ ಅತ್ಯಂತ ಉತ್ಪಾದಕ ಪರಿಸರ ವ್ಯವಸ್ಥೆಯಲ್ಲಿ ಒಂದಾಗಿದೆ. ಮಳೆಕಾಡುಗಳಲ್ಲಿನ ಜೌಗು ಪ್ರದೇಶಗಳನ್ನು ಜೈವಿಕ ಸೂಪರ್ ಮಾರ್ಕೆಟ್ ಎಂದು ಪರಿಗಣಿಸಬಹುದು.ಅನೇಕ ಜೀವ ವೈವಿಧ್ಯಗಳಿಗೆ ಆಹಾರವನ್ನು ಒದಗಿಸುವ ಜೌಗು ಭೂಮಿಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ ಇಂದಿನ ಅಗತ್ಯ ಎಂದು ಯೂತ್ ಫಾರ್ ಸೇವಾ ಪರಿಸರ ಸಂಯೋಜಕ ಉಮಾಪತಿ ಭಟ್ಟ್ ಕೆವಿ ಹೇಳಿದರು.
ಅವರು ಗಜಾನನ ಸೆಕೆಂಡರಿ ಸ್ಕೂಲ್ ಸುಂದರಲಾಲ ಬಹುಗುಣ ಇಕೋ ಕ್ಲಬ್ ಹಾಗೂ ಯೂತ್ ಫಾರ್ ಸೇವಾ ಸಂಯುಕ್ತಾಶ್ರಯದಲ್ಲಿ ಪೌರಾಣಿಕ ಮಹತ್ವವುಳ್ಳ ತೀರ್ಥಗಾನ ಜೌಗು ಪ್ರದೇಶದಲ್ಲಿ ವಿಶ್ವ ಜೌಗು ಭೂಮಿ ದಿನ ಆಚರಣೆಯ ನಿಮಿತ್ತ ಏರ್ಪಡಿಸಿದ್ದ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಳೆ ಕಾಡುಗಳಲ್ಲಿ ಕಂಡುಬರುವ ಅಪರೂಪದ ಹಾಗೂ ವೈಶಿಷ್ಠ್ಯಪೂರ್ಣ ಪರಿಸರ ವ್ಯವಸ್ಥೆ. ರಾಮಪತ್ರೆಜಡ್ಡಿಯು ಹಲವು ನದಿ-ತೊರೆಗಳ ಉಗಮಗಳಿಗೆ ಆಸರೆಯ ಸ್ಥಾನ. ಮಳೆಗಾಲದಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಬೇಸಿಗೆಯಲ್ಲಿ ಬಿಟ್ಟುಕೊಡುವ ಅಂದರೆ ಒಂದು ಸ್ಪಂಜಿನಂತೆ ಕಾರ್ಯ ಮಾಡುವ ವಿಶಿಷ್ಠ ಭೂಮಿಯಾಗಿದೆ.
ಡೈನೊಸಾರ್ ಕಾಲದ ಸಸ್ಯವರ್ಗ ಇಲ್ಲಿನ ವಿಶೇಷತೆ ಮಿರಿಸ್ಟಿಕಾ ಪಟುವಾ, ಜಿಮ್ನೆಕ್ರಾಂತ್ ಕೆನರಿಕಾ , ಸೆಮಿಕಾರ್ಪಸ್ ಕತ್ತಲೆಕಾನ್ಸಿಸ್ ಮರಗಳಿಂದಾಗಿ ಈ ಭೂಮಿ ಜೌಗುಪ್ರದೇಶವಾಗಿದೆ. ನೀರಿನಾಶ್ರಯದಲ್ಲಿ ಬೆಳೆಯಬಹುದಾದ ಅನೇಕ ಔಷಧ ಸಸ್ಯಗಳು ಇಲ್ಲಿರುತ್ತವೆ. ವಿಸ್ಮಯಕಾರಿ ಬೇರುಗಳ ರಚನೆಯ ಮರಗಳೇ ಆಕರ್ಷಣೀಯ. ಅಂತರ್ಜಲ ಸಂರಕ್ಷಣೆಯಲ್ಲಿ ರಾಮಪತ್ರೆಜಡ್ಡಿಗಳು ಬಹುಮುಖ್ಯ ಪಾತ್ರವಹಿಸುತ್ತವೆ ಮತ್ತು ಸಕಲ ಜೀವವೈವಿದ್ಯತೆಯ ಸಂರಕ್ಷಣಾ ತಾಣವಾಗಿದೆ. ಇಲ್ಲಿನ ನೀರನ್ನು ಬೇರೆಡೆಗೆ ತಿರುಗಿಸುವದು ಹಾಗೂ ತೋಟಗಾರಿಕಾ ಕ್ಷೇತ್ರ ವಿಸ್ತರಣೆಯಿಂದಾಗಿ ಇಂದು ಸಂರಕ್ಷಣೆಗೆ ಸವಾಲಾಗಿದೆ ಎಂದರು.
ಹೆಗಡೆಕಟ್ಟಾ ಸಮೀಪದ ತೀರ್ಥಗಾನ ಜೌಗು ಭೂಮಿಯಲ್ಲಿ ಬಬ್ಬಿ, ಬನಾಟೆ, ಕೆಂಪುನೇರಳೆ, ಅತ್ತಿ, ಕದಂಬ, ಒಂದಂಕಿ ಗಿಡಗಳನ್ನು ಇಕೋಕ್ಲಬ್ ನ ವಿದ್ಯಾರ್ಥಿಗಳ ಪರಿಸ ಗೀತೆ ಹಾಡುಗಳ ಮೂಲಕ ನೆಡಲಾಯಿತು. ನಂತರ ಜೌಗುಭುಮಿಯ ಕುರಿತು ಯೂತ್ ಫಾರ್ ಸೇವಾ ಸ್ವಯಂ ಸೇವಕಿ ರಕ್ಷಾ ಪವರ್ ಪಾಯಿಂಟ್ ಮೂಲಕ ತಿಳಿಸಿಕೊಟ್ಟರು.
ಯೂತ್ ಫಾರ್ ಸೇವಾ ವಾಲಂಟಿಯರ್ಸ್ ಅರಣ್ಯ ಮಹಾ ವಿದ್ಯಾಲಯದ ರಕ್ಷಾ, ವಿನಾಯಕ,ಕಿರಣ,ಸುಷ್ಮಾಬಿಳಗಿ,ಕೃತಿ,ಶ್ರೇಯಾ,ಮನೋಜ,ಭಾರತಿಎನ್,ಐಶ್ವರ್ಯ,ಪವಿತ್ರ,ಶಿಕ್ಷಕ ರಘುಪತಿ ಹೆಗಡೆ , ಶಿಕ್ಷಕಿ ವೀಣಾ ಭಟ್ಟ್ ಹಾಗೂ ಶಿಕ್ಷಕರಾದ ಕೆ.ಎನ್ ನಾಯ್ಕ, ಎಂ.ಎಚ್.ನಾಯಕ ಪಾಲ್ಗೊಂಡಿದ್ದರು.ಮುಖ್ಯಾಧ್ಯಾಪಕ ಶೈಲೇಂದ್ರ ಎಂ.ಎಚ್ ಅವರು ವಂದಿಸಿದರು.