ಕಾರವಾರ: ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ನೌಕರನೋರ್ವ ಖಾಸಗಿ ಹೋಟೆಲ್’ನ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಹೊನ್ನಾವರ ಮೂಲದ ಈಶ್ವರ ಭಟ್ಟ (38) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದು, ಅನಾರೋಗ್ಯದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಈ ಬಗ್ಗೆ ಯಾರಿಗೂ ತೊಂದರೆ ನೀಡಬೇಡಿ ಎಂದು ಪತ್ರ ಬರೆದಿಟ್ಟು, ನೇಣು ಬಿಗಿದುಕೊಂಡಿದ್ದಾರೆ. ಮೃತರ ಪತ್ನಿಯು ಕಾರವಾರದ ತಹಸೀಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ವಿಜಯಲಕ್ಷ್ಮೀ ರಾಯಕೋಡ, ಡಿವೈಎಸ್ಪಿ ವ್ಯಾಲಂಟೈನ್ ಡಿಸೋಜಾ, ತಹಸೀಲ್ದಾರ ನಿಶ್ಚಲ ನರೋನಾ, ನಗರ ಠಾಣೆಯ ಪಿಎಸ್ಐ ಸಂತೋಷಕುಮಾರ ನೇತೃತ್ವದ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.